
ನವದೆಹಲಿ: ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಇಲ್ಲಿನ ಕನ್ನಾಟ್ ಪ್ಲೇಸ್ನಲ್ಲಿರುವ ಹನುಮಾನ್ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದರು. ಅವರೊಂದಿಗೆ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ದುರ್ಗೇಶ್ ಪಾಠಕ್ ಸೇರಿದಂತೆ ಹಿರಿಯ ನಾಯಕರು ಇದ್ದರು.
ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯವು ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರ 21 ಜನರನ್ನು ಶುಕ್ರವಾರ ಖುಲಾಸೆಗೊಳಿಸಿದೆ. ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ಈ ಪ್ರಕರಣವು ದೆಹಲಿಯ ಎಎಪಿ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.
ಎಎಪಿಯ ಹಿರಿಯ ನಾಯಕ ಸೌರಭ್ ಭಾರದ್ವಾಜ್ ಮಾತನಾಡಿ, ‘ಆದೇಶವು ಕೆಳ ನ್ಯಾಯಾಲಯದಿಂದ ಬಂದಿದೆ, ಉನ್ನತ ನ್ಯಾಯಾಲಯದಲ್ಲಿ ಪ್ರಕರಣ ಇನ್ನೂ ಬಾಕಿಯಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಹನುಮಾನ್ ದೇವರ ನ್ಯಾಯಾಲಯವೇ ಅತ್ಯುನ್ನತವಾದುದಾಗಿದೆ. ನಾವು ಅವರಿಂದ ಆಶೀರ್ವಾದ ಪಡೆದಿದ್ದೇವೆ’ ಎಂದು ಹೇಳಿದರು.
ಭಾನುವಾರ ಪಕ್ಷದ ರಾಷ್ಟ್ರೀಯ ನಾಯಕರು ಜಂತರ್ ಮಂತರ್ನಲ್ಲಿ ಸಭೆ ಸೇರಲಿದ್ದು, ಅಲ್ಲಿ ಕೇಜ್ರಿವಾಲ್ ಸಭೆಯನ್ನು ಉದ್ದೇಶಿಸಿ ಮುಂದಿನ ದಾರಿಯನ್ನು ವಿವರಿಸಲಿದ್ದಾರೆ ಎಂದು ಭಾರದ್ವಾಜ್ ತಿಳಿಸಿದರು.
‘ಕೇಜ್ರಿವಾಲ್ ಪ್ರಾಮಾಣಿಕರಾಗಿದ್ದರು ಮತ್ತು ಭಗವಾನ್ ಬಜರಂಗಬಲಿಯ ಆಶೀರ್ವಾದವು ರಾಜಕೀಯ ಯುದ್ಧದಲ್ಲಿ ಅವರಿಗೆ ಬಲ ನೀಡಿದೆ. ಒಂದು ವೇಳೆ ಸಿಬಿಐ ಮೇಲ್ಮನವಿ ಸಲ್ಲಿಸಿದರೆ, ಅದಕ್ಕೆ ಬಿಜೆಪಿಯ ನಿರ್ದೇಶನವೇ ಕಾರಣ’ ಎಂದು ಕೊಂಡ್ಲಿಯ ಶಾಸಕ ಕುಲದೀಪ್ ಕುಮಾರ್ ತಿಳಿಸಿದರು.
ಪ್ರಕರಣದಿಂದ ಖುಲಾಸೆಗೊಂಡವರಲ್ಲಿ ತೆಲಂಗಾಣ ಜಾಗೃತಿ ಅಧ್ಯಕ್ಷೆ ಕೆ.ಕವಿತಾ ಕೂಡ ಇದ್ದಾರೆ. ಪ್ರಕರಣದ ತನಿಖೆಯ ವೇಳೆ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.