ADVERTISEMENT

'ನಾನು ಗೃಹ ಸಚಿವ ಹೇಳ್ತಿದ್ದೀನಿ, ಆಹಾರ-ಔಷಧಿ ಸಾಕಷ್ಟಿದೆ': ಅಮಿತ್‌ ಶಾ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 9:40 IST
Last Updated 14 ಏಪ್ರಿಲ್ 2020, 9:40 IST
ಗೃಹ ಸಚಿವ ಅಮಿತ್‌ ಶಾ
ಗೃಹ ಸಚಿವ ಅಮಿತ್‌ ಶಾ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿ, ಲಾಕ್‌ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿರುವುದಾಗಿ ಹೇಳಿದ ಬೆನ್ನಿಗೇ ಗೃಹ ಸಚಿವ ಅಮಿತ್‌ ಶಾ ಸರಣಿ ಟ್ವೀಟ್‌ಗಳ ಮೂಲಕ ದೇಶದ ಜನರಲ್ಲಿ ವಿಶ್ವಾಸ ತುಂಬಲು ಯತ್ನಿಸಿದ್ದಾರೆ.

'ದೇಶದ ಗೃಹ ಸಚಿವನಾಗಿ ನಾನು ಎಲ್ಲರಿಗೂ ಭರವಸೆ ಕೊಡಲು ಇಚ್ಛಿಸುತ್ತೇನೆ. ದೇಶದಲ್ಲಿ ಆಹಾರ, ಔಷಧಿ ಮತ್ತು ಇತರ ಅತ್ಯಗತ್ಯ ವಸ್ತುಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿವೆ. ಯಾವೊಬ್ಬ ಪ್ರಜೆಯೂ ಆತಂಕಪಡುವ ಅಗತ್ಯವಿಲ್ಲ' ಎಂದು ಅಮಿತ್ ಶಾ ಹೇಳಿದ್ದಾರೆ.

ಶಕ್ತ ಜನರು ಮುಂದೆ ಬಂದು ಅಶಕ್ತರಿಗೆ ನೆರವಾಗಬೇಕು. ತಮ್ಮ ಸನಿಹದಲ್ಲಿ ವಾಸಿಸುತ್ತಿರುವ ಬಡವರಿಗೆ ಆಸರೆಯಾಗಬೇಕು ಎಂದು ಅಮಿತ್ ಶಾ ವಿನಂತಿಸಿದ್ದಾರೆ.

ADVERTISEMENT

'ಲಾಕ್‌ಡೌನ್‌ ಜಾರಿಗೊಳಿಸುವ ವಿಚಾರದಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ನಡುವೆ ಸಹಕಾರ ಮತ್ತು ಸಹಯೋಗ ಇರಬೇಕು.'ದೇಶದ ಯಾವುದೇ ಜನರಿಗೆ ಅವರ ಅಗತ್ಯದ ವಸ್ತುಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಬಾರದು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಇನ್ನಷ್ಟು ಸಹಯೋಗದಿಂದಕೆಲಸಗಳು ನಡೆಯಬೇಕಿವೆ' ಎಂದು ಹೇಳಿದ್ದಾರೆ.

'ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕೊರೊನಾ ಸೋಂಕು ನಿವಾರಣೆಯಲ್ಲಿ ಅತಿಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರ ಪರಿಶ್ರಮವನ್ನು ನಾವೆಲ್ಲರೂ ಗೌರವಿಸಬೇಕು' ಎಂದು ಹೇಳಿದ್ದಾರೆ.

'ನಿಮ್ಮ ಧೈರ್ಯ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವು ಸ್ಪಂದಿಸುತ್ತಿರುವ ರೀತಿ ಎಲ್ಲ ಭಾರತೀಯರಿಗೆ ಪ್ರೇರಣಾದಾಯಿ. ನಿಯಮಗಳನ್ನು ಎಲ್ಲರೂ ಅನುಸರಿಸಬೇಕು. ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕು' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.