ಕಾನ್ಪುರ: ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಸಮಾಜವಾದಿ ಪಕ್ಷದ ಏಜೆಂಟ್ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ.
ರಾಜ್ಯದಲ್ಲಿ ಓವೈಸಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಯೋಗಿ,ಅಹಿತಕರ ಘಟನೆಗೆ ಕಾರಣವಾದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾನ್ಪುರದಲ್ಲಿ ಪಕ್ಷದಜಿಲ್ಲಾ ಕೇಂದ್ರ ಕಚೇರಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಈ ಹಿಂದೆ ರಾಜ್ಯದಲ್ಲಿ ಪ್ರತೀ ಮೂರ್ನಾಲ್ಕು ದಿನಗಳಿಗೊಮ್ಮೆ ಗಲಭೆಗಳು ನಡೆಯುತ್ತಿದ್ದವು. ಈಗ ಉತ್ತರ ಪ್ರದೇಶಕ್ಕೆ ಗಲಭೆ ಮುಕ್ತ ರಾಜ್ಯ ಎಂಬ ಹೆಸರು ಬಂದಿದೆ. ಚಾಚಾ ಜಾನ್(ಓವೈಸಿ), ಅಬ್ಬಾ ಜಾನ್(ಮುಲಾಯಂ) ಅನುಯಾಯಿಗಳೇ ಕೇಳಿ. ರಾಜ್ಯದ ಹಿತಾಸಕ್ತಿ ಬಲಿಕೊಡುವ ಗಲಭೆಗೆ ಪ್ರಚೋದನೆ ನೀಡುವಂತಹ ಕೃತ್ಯ ಎಸಗಿದರೆ ಅದರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳುವುದು ನಮಗೆ ತಿಳಿದಿದೆ’ಎಂದು ಎಚ್ಚರಿಕೆ ನೀಡಿದ್ದಾರೆ.
‘ಸಮಾಜವಾದಿ ಪಕ್ಷದ ಏಜೆಂಟರಾಗಿ ಗಲಭೆ ಪ್ರಚೋದಿಸುವ ಕೆಲಸದಲ್ಲಿ ಓವೈಸಿ ನಿರತರಾಗಿದ್ದಾರೆ. ಹಾಲಿ ಸರ್ಕಾರವು ಗಲಭೆಗಳಿಗೆ ಸೊಪ್ಪು ಹಾಕುತ್ತಿಲ್ಲ. ಮಾಫಿಯಾಗಳ ಮೇಲೆ ಬುಲ್ಡೋಜರ್ ಹರಿಸುತ್ತಿದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು’ ಎಂದು ಯೋಗಿ ಗುಡುಗಿದ್ದಾರೆ.
ಕೃಷಿ ಕಾಯ್ದೆಗಳ ರೀತಿಯೇ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್)ಯನ್ನು ಹಿಂಪಡೆಯಬೇಕು ಎಂದು ಅಸಾದುದ್ದೀನ್ ಓವೈಸಿ ಬೆಳಗ್ಗೆ ಒತ್ತಾಯಿಸಿದ್ದರು.
‘ಸರ್ಕಾರವು ಎನ್ಪಿಆರ್ ಮತ್ತು ಸಿಎಎಗಳನ್ನು ಜಾರಿಗೆ ತಂದರೆ, ನಾವು ಮತ್ತೊಂದು ‘ಶಾಹೀನ್ ಬಾಗ್’ ಸೃಷ್ಟಿಸುತ್ತೇವೆ’ ಎಂದು ಹೇಳಿದ್ದರು.
ಸಿಎಎ ವಿರೋಧಿಸಿ ದೆಹಲಿ ‘ಶಾಹೀನ್ ಬಾಗ್‘ ಪ್ರದೇಶದಲ್ಲಿ ಡಿಸೆಂಬರ್ 2019ರಿಂದ ಮಾರ್ಚ್ 2020ರವರೆಗೆ ಬೃಹತ್ ಹೋರಾಟ ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.