ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ತಮ್ಮ ನಿವಾಸದ ಮೇಲೆ ಆಗಂತುಕ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಅವರು ರಾಜಸ್ಥಾನ ಪ್ರವಾಸದಲ್ಲಿರುವ ವೇಳೆ ಈ ಘಟನೆ ನಡೆದಿದೆ.
ಬಗ್ಗೆ ಟ್ವೀಟ್ ಮಾಡಿರುವ ಅವರು, ಘಟನೆ ಸಂಬಂಧ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಗಿ ಹೇಳಿದ್ದಾರೆ.
‘ನನ್ನ ದೆಹಲಿ ನಿವಾಸದ ಮೇಲೆ ಮತ್ತೆ ದಾಳಿ ನಡೆದಿದೆ. 2014ರ ಬಳಿಕ ಹೀಗೆ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ. ಇಂದು ರಾತ್ರಿ ನಾನು ಜೈಪುರದಿಂದ ಮರಳಿದ್ದು, ಆಗಂತುಕ ದುಷ್ಕರ್ಮಿಗಳ ತಂಡವೊಂದು ನನ್ನ ಮನೆ ಮೇಲೆ ಕಲ್ಲು ಎಸೆದಿದೆ. ಮನೆಯ ಕಿಟಕಿ ಗಾಜುಗಳು ಮುರಿದಿವೆ. ದೆಹಲಿ ಪೊಲೀಸರು ಅವರನ್ನು ಶೀಘ್ರವೇ ಪತ್ತೆ ಮಾಡಬೇಕು‘ ಎಂದು ಅವರು ಸರಣಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
‘ಅತ್ಯಂತ ಭದ್ರತೆ ಇರುವ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕಳವಳಕಾರಿ ಸಂಗತಿಯಾಗಿದೆ. ದೆಹಲಿ ಪೊಲೀಸರಿಗೆ ನಾನು ದೂರು ನೀಡಿದ್ದು, ಅವರು ನನ್ನ ಮನೆಗೆ ಭೇಟಿ ನೀಡಿದ್ದಾರೆ‘ ಎಂದು ಅವರು ಹೇಳಿದ್ದಾರೆ.
‘ಘಟನೆ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ಸಾಗುತ್ತಿದೆ‘ ಎಂದು ನವದೆಹಲಿಯ ಪೊಲೀಸ್ ಉಪ ಆಯುಕ್ತ ಪ್ರಣವ್ ತ್ಯಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.