ಮುಂಬೈ: ‘ಕೋವಿಡ್ ತೃತೀಯ ಅಲೆಯ ಭೀತಿಯ ನಡುವೆಯೂ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆಯ ರ್ಯಾಲಿಗಳು ಜನರನ್ನು ಪ್ರಾಣಾಪಾಯಕ್ಕೆ ದೂಡುತ್ತಿವೆ’ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಠಾಣೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕವನ್ನು ವರ್ಚುವಲ್ ವೇದಿಕೆಯಲ್ಲಿ ಉದ್ಘಾಟಿಸಿದ ಅವರು, ‘ಇಂತಹ ರ್ಯಾಲಿಗಳಿಂದಾಗಿ ಜನರು ಮೃತಪಟ್ಟರೂ ಈ ಜನರು (ರ್ಯಾಲಿ ಆಯೋಜಕರು) ಚಿಂತಿಸುವುದಿಲ್ಲ’ ಎಂದರು.
ಕೇಂದ್ರ ಸಂಪುಟಕ್ಕೆ ಹೊಸದಾಗಿ ಸೇರಿರುವ ಬಿಜೆಪಿಯ ಸಚಿವರು ಜನಾಶೀರ್ವಾದ ಯಾತ್ರೆ ಆಯೋಜಿಸುತ್ತಿದ್ದಾರೆ. ಇವರು ಜನರಿಂದ ಆಶೀರ್ವಾದ ಪಡೆಯುತ್ತಿಲ್ಲ. ಬದಲಿಗೆ ಅವರನ್ನೇ ಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಟೀಕಿಸಿದರು.
‘ಶಿವಸೇನೆ ಸ್ಥಾಪನೆಯಾದಾಗ ಅದು ಶೇ 80ರಷ್ಟು ಸಾಮಾಜಿಕ ಸೇವೆ, ಶೇ 20ರಷ್ಟು ರಾಜಕಾರಣ ಮಾಡಲಿದೆ ಎಂದು ಹೇಳಿತ್ತು. ಇಂದು ಕೆಲ ಪಕ್ಷಗಳಿವೆ. ಶೇ 100ರಷ್ಟು ರಾಜಕಾರಣವನ್ನೇ ಮಾಡುತ್ತಿವೆ. ಜನರಿಗೆ ನೆರವಾಗುವ ಯಾವ ಕೆಲಸವನ್ನೂ ಅವು ಮಾಡುವುದಿಲ್ಲ. ಜನರಿಗೆ ಸಮಸ್ಯೆಯಾಗುವಂತೆ ರ್ಯಾಲಿ ಆಯೋಜಿಸುತ್ತವೆ‘ ಎಂದರು.
ಕೋವಿಡ್ ಮಾರ್ಗಸೂಚಿ ಕಾರಣದಿಂದಾಗಿ ಕೃಷ್ಣ ಜನ್ಮಾಷ್ಟಮಿ ಮಾರನೆ ದಿನ ನಡೆಯುತ್ತಿದ್ದ ‘ದಹಿ ಹಂಡಿ’ ಆಚರಣೆ ಸಂತಸವನ್ನು ನಾನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂದರು. ಈ ಮಧ್ಯೆ, ದಹಿ ಹಂಡಿ ಕಾರ್ಯಕ್ರಮವನ್ನು ನಿರ್ಬಂಧಗಳ ನಡುವೆಯೂ ನೆರೆಯ ಪಾಲ್ಗಾರ್ ಜಿಲ್ಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಆಚರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.