ಜೈಪುರ: ರಾಜಸ್ಥಾನ ವಿಧಾನಸಭೆಯ ಅಧಿವೇಶನವನ್ನು ಇದೇ ತಿಂಗಳ 31ರಂದು ಕರೆಯುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸಚಿವ ಸಂಪುಟ ಕಳುಹಿಸಿದ್ದ ಪ್ರಸ್ತಾವನೆಯನ್ನು ರಾಜ್ಯಪಾಲ ಕಲ್ರಾಜ್ ಮಿಶ್ರಾ ಮೂರನೇ ಬಾರಿಗೆ ತಿರಸ್ಕರಿಸಿದ್ದಾರೆ.
ವಿಧಾನಸಭೆಯ ಅಧಿವೇಶನ ನಡೆಸಲು ಅನುಮತಿ ಕೋರಿ ರಾಜಸ್ಥಾನ ಸರ್ಕಾರವು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಮಂಗಳವಾರ ಹೊಸ ಪ್ರಸ್ತಾವನೆಯನ್ನು ಕಳುಹಿಸಿತ್ತು.
ಅಧಿವೇಶನಕ್ಕೆ ಅನುಮತಿ ಕೋರಿ ಸರ್ಕಾರವು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕಳೆದ ಐದು ದಿನಗಳಲ್ಲಿ ರಾಜ್ಯಪಾಲರು ಎರಡು ಬಾರಿ ತಿರಸ್ಕರಿಸಿದ್ದರು.
21 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು, ಕೋವಿಡ್ ಕಾರಣದಿಂದ ಆಸನ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು ಹಾಗೂ ವಿಶ್ವಾಸಮತ ನಿರ್ಣಯ ಮಂಡಿಸುವುದಾದರೆ ಆ ಬಗ್ಗೆ ಮಾಹಿತಿ ನೀಡಬೇಕು ಮತ್ತು ಅದರ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಬೇಕು ಎಂಬ ಷರತ್ತುಗಳನ್ನು ರಾಜ್ಯಪಾಲರು ವಿಧಿಸಿದ್ದರು.
ಈ ವಿಚಾರವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಇಂದು (ಬುಧವಾರ) ಭೇಟಿ ಮಾಡಿರುವ ಮಾಹಿತಿ ಲಭ್ಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.