ADVERTISEMENT

ಕರಣ್‌ಪುರ ಉಪಚುನಾವಣೆ | ಬಿಜೆಪಿ ದುರಹಂಕಾರಕ್ಕೆ ತಕ್ಕ ಪಾಠ: ಅಶೋಕ್‌ ಗೆಹಲೋತ್‌

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 3:49 IST
Last Updated 9 ಜನವರಿ 2024, 3:49 IST
<div class="paragraphs"><p> ಅಶೋಕ್‌ ಗೆಹಲೋತ್‌</p></div>

ಅಶೋಕ್‌ ಗೆಹಲೋತ್‌

   

ಜೈಪುರ: ರಾಜಸ್ಥಾನದ ಕರಣ್‌ಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಚಿವ ಸುರೇಂದ್ರ ಪಾಲ್ ಸಿಂಗ್ ಟಿ.ಟಿ ಅವರು ಕಾಂಗ್ರೆಸ್‌ ಅಭ್ಯರ್ಥಿ ರೂಪಿಂದರ್ ಸಿಂಗ್ ಕೂನರ್ ವಿರುದ್ಧ ಪರಾಭವಗೊಂಡಿದ್ದು, ಆಡಳಿತಾರೂಢ ಬಿಜೆಪಿಗೆ ಭಾರಿ ಮುಜುಗರವಾಗಿದೆ. ಫಲಿತಾಂಶದ ಬೆನ್ನಲ್ಲೇ ಸುರೇಂದ್ರ ಪಾಲ್ ಸಿಂಗ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸೋಮವಾರ ಮತ ಎಣಿಕೆ ನಡೆದು, ರೂಪಿಂದರ್‌ ಸಿಂಗ್ ಅವರು ಸುರೇಂದ್ರ ಪಾಲ್‌ ಸಿಂಗ್‌ ಅವರನ್ನು 12,570 ಮತಗಳ ಅಂತರದಿಂದ ಸೋಲಿಸಿದ್ದಾರೆ. 

ADVERTISEMENT

ಬಿಜೆಪಿ ದುರಹಂಕಾರಕ್ಕೆ ತಕ್ಕ ಪಾಠ: ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹಲೋತ್‌, ‘ಈ ಉಪಚುನಾವಣೆ ಹಲವು ಸಂದೇಶಗಳನ್ನು ರವಾನಿಸಿದೆ. ಬಿಜೆಪಿಯ ದುರಹಂಕಾರಕ್ಕೆ ಜನರು ತಕ್ಕ ಪಾಠ ಕಲಿಸಿದ್ದು, ಅದರ ನೈತಿಕ ಅಧಃಪತನವೂ ಬಹಿರಂಗೊಂಡಿದೆ’ ಎಂದಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ನಾವು ಭಾರಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದ್ದೆ. ರಾಜ್ಯದಲ್ಲಿ ಬಿಜೆಪಿಯು ಸರ್ಕಾರ ರಚಿಸಿದ್ದರೂ ಕಾಂಗ್ರೆಸ್‌ ಪಕ್ಷವು ದುರ್ಬಲವಾಗಿಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಈ ಫಲಿತಾಂಶವು ನಮಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ಸಿದ್ಧಾಂತ ಮತ್ತು ನೀತಿಗಳಲ್ಲಿ ಕರಣ್‌ಪುರದ ಜನತೆ ಭರವಸೆ ಇಟ್ಟಿದ್ದಾರೆ. ಈ ತೀರ್ಪಿನ ಮೂಲಕ ಜನರು ಅಭಿವೃದ್ಧಿ, ಭದ್ರತೆ ಮತ್ತು ತಮ್ಮ ಭವಿಷ್ಯದ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಚಿನ್ ಪೈಲಟ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ. 

ಸುರೇಂದ್ರ ಪಾಲ್ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಬಿಜೆಪಿಯು ಚುನಾವಣಾ ನೀತಿ ಸಂಹಿತೆಯ ಅಣಕ ಮಾಡಿತ್ತು  ಜೈರಾಮ್ ರಮೇಶ್, ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.