ಗುವಾಹಟಿ : ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಅಸ್ಸಾಂನಲ್ಲಿ ಶನಿವಾರ ಧರಣಿ, ಪ್ರತಿಭಟನೆಗಳು ಭುಗಿಲೆದ್ದಿವೆ.
ಅಸ್ಸಾಂಗೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ‘ಪೌರತ್ವ ತಿದ್ದುಪಡಿ ಮಸೂದೆ –2016’ ಶೀಘ್ರ ಸಂಸತ್ ಅಂಗೀಕಾರ ಪಡೆಯುವ ಸುಳಿವು ನೀಡಿದ್ದರು. ಅದರ ಬೆನ್ನಲ್ಲೇ ಜನರು ಬೀದಿಗೆ ಇಳಿದಿದ್ದಾರೆ.
ದಿಬ್ರೂಗಡ ಮತ್ತು ಅಸ್ಸಾಂ ಕೆಳಭಾಗ ಸೇರಿದಂತೆ ಹಲವೆಡೆ ಬೀದಿಗಿಳಿದ ನಾಗರಿಕರು ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದಾರೆ.
ಕೃಷಿಕ ಮುಕ್ತಿ ಸಂಗ್ರಾಮ ನೇತೃತ್ವದಲ್ಲಿ 70ಕ್ಕೂ ಹೆಚ್ಚು ಸಂಘಟನೆಗಳು ಮಸೂದೆ ವಿರುದ್ಧ ಗುವಾಹಟಿಯಲ್ಲಿ ಬೃಹತ್ ರ್ಯಾಲಿ ನಡೆಸಿವೆ. ಬಿಜೆಪಿ ಜತೆ ಮೈತ್ರಿಯನ್ನು ಕಡಿದುಕೊಳ್ಳುವಂತೆ ಒತ್ತಾಯಿಸಿ ಅಸ್ಸಾಂ ಗಣ ಪರಿಷತ್ (ಎಜಿಪಿ) ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ಮುಂದಾಗಿದ್ದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ಕೊಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.