ರೈಲು ಹಳಿ
ಸಾಂದರ್ಭಿಕ ಚಿತ್ರ
ಕೊಕ್ರಝಾರ್(ಅಸ್ಸಾಂ): ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ರೈಲ್ವೆ ಹಳಿಯಲ್ಲಿ ದುಷ್ಕರ್ಮಿಗಳು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಿಸಿದ್ದು, ಗುರುವಾರ ಮುಂಜಾನೆ ಅಸ್ಸಾಂ ಮತ್ತು ಉತ್ತರ ಬಂಗಾಳದ ಕೆಲವು ಭಾಗಗಳಲ್ಲಿ ರೈಲ್ವೆ ಸೇವೆ ಅಸ್ತವ್ಯಸ್ತಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯರಾತ್ರಿಯ ನಂತರ ಸಲಕಟಿ ಕಡೆಗೆ ಹೋಗುವ ಮಾರ್ಗದಲ್ಲಿ ಕೊಕ್ರಝಾರ್ ರೈಲು ನಿಲ್ದಾಣದಿಂದ ಸುಮಾರು ಐದು ಕಿ.ಮೀ ದೂರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಸ್ಫೋಟದಿಂದ ಸುಮಾರು ಮೂರು ಅಡಿಯಷ್ಟು ರೈಲು ಹಳಿ ಕಿತ್ತುಹೋಗಿತ್ತು. ಹಾನಿಗೊಳಗಾದ ಹಳಿಯ ತುಂಡುಗಳು ಹಲವಾರು ಮೀಟರ್ ದೂರಕ್ಕೆ ಚಿಮ್ಮಿವೆ’ಎಂದು ಅವರು ಹೇಳಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವುನೋವು ಅಥವಾ ಹಳಿತಪ್ಪಿದ ಬಗ್ಗೆ ವರದಿಗಳಿಲ್ಲ ಎಂದು ಕೊಕ್ರಝಾರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪರಾಜ್ ಸಿಂಗ್ ತಿಳಿಸಿದ್ದಾರೆ.
‘ಹಾನಿಗೊಳಗಾಗಿದ್ದ ಹಳಿಯನ್ನು ದುರಸ್ತಿ ಮಾಡಲಾಗಿದ್ದು, ಈಗ ರೈಲು ಸಂಚಾರ ಪುನರಾರಂಭಿಸಲಾಗಿದೆ’ಎಂದು ಅವರು ಹೇಳಿದ್ದಾರೆ.
ರಾತ್ರಿಯಿಡೀ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಕೆಳಬದಿಯ ಅಸ್ಸಾಂ ಮತ್ತು ಉತ್ತರ ಪಶ್ಚಿಮ ಬಂಗಾಳದಲ್ಲಿ ಬೆಳಿಗ್ಗೆ 8 ಗಂಟೆಯವರೆಗೆ ಹಲವು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ರೈಲು ಸೇವೆಗಳನ್ನು ಪುನಃಸ್ಥಾಪಿಸುವ ಮೊದಲು ರೈಲ್ವೆ ಮತ್ತು ಭದ್ರತಾ ಸಿಬ್ಬಂದಿ ಈ ಹಳಿಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳು ಮಾರ್ಗದುದ್ದಕ್ಕೂ ಭದ್ರತೆಯನ್ನು ತೀವ್ರಗೊಳಿಸಿದ್ದಾರೆ. ಸ್ಫೋಟದಲ್ಲಿ ಭಾಗಿಯಾಗಿರುವವರನ್ನು ಗುರುತಿಸಿ ಬಂಧಿಸಲು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.