ಇಂಫಾಲ್: ಮಣಿಪುರದಲ್ಲಿ ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ ನಡೆದಿದ್ದು, ಸೇನಾಧಿಕಾರಿ, ಅವರ ಪತ್ನಿ ಮತ್ತು ಮಗ ಸೇರಿದಂತೆ 6 ಮಂದಿ ಮೃತಪಟ್ಟಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಇದು ಈ ಭಾಗದಲ್ಲಿ ಈ ವರ್ಷನಡೆದ ಅತ್ಯಂತ ಭೀಕರ ದಾಳಿಯಾಗಿದೆ.
ಮಣಿಪುರದ ಮ್ಯಾನ್ಮಾರ್ ಗಡಿಯ ಚುರಾಚಂದಪುರ ಜಿಲ್ಲೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ. ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಅಸ್ಸಾಂ ರೈಫಲ್ಸ್ಗೆ ಸೇರಿದ ಸೇನಾ ವಾಹನದ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಿದೆ.
ದಾಳಿ ನಡೆದ ಜಾಗವು ಅತ್ಯಂತ ದುರ್ಗಮ ಪ್ರದೇಶವಾಗಿದ್ದು, ಇಂಫಾಲ್ನಿಂದ 100 ಕಿ,.ಮೀ ದೂರದಲ್ಲಿದೆ.
ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು, ಸೇನಾಧಿಕಾರಿ ಮತ್ತು ಅವರ ಕುಟುಂಬ ಸದಸ್ಯರು ಸಾವಿಗೀಡಾಗಿರುವುದನ್ನು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವುದಾಗಿ ಅವರು ತಿಳಿಸಿದ್ಧಾರೆ.
‘ಸೇನಾಧಿಕಾರಿ ಕುಟುಂಬ ಮತ್ತು ಸೇನಾ ಸಿಬ್ಬಂದಿ ಸಾವಿಗೀಡಾದ 46 ಎಆರ್ನ ಬೆಂಗಾವಲು ಪಡೆ ಮೇಲೆ ನಡೆದ ಹೇಡಿತನದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಉಗ್ರಗಾಮಿಗಳನ್ನು ಪತ್ತೆ ಹಚ್ಚುವಕೆಲಸದಲ್ಲಿ ರಾಜ್ಯ ಪಡೆಗಳು ಮತ್ತು ಪ್ಯಾರಾ ಮಿಲಿಟರಿ ಈಗಾಗಲೇ ತೊಡಗಿವೆ’ ಎಂದು ಸಿಂಗ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.