ಗುವಾಹಟಿ: ಕಳೆದ ಮೂರು ದಿನಗಳಿಂದ ಅಸ್ಸಾಂ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಮತ್ತು ಸಿಡಿಲಿನಿಂದ ಉಂಟಾದ ಪ್ರವಾಹದಲ್ಲಿ ಮತ್ತೆ ಆರು ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ಭಾನುವಾರ ತಿಳಿಸಿದೆ.
ಭಾರಿ ಮಳೆ, ಮಿಂಚು–ಗುಡುಗು ಅಲ್ಲದೆ ಬಲವಾದ ಗಾಳಿಯು ಬೀಸುತ್ತಿದೆ. ಚಂಡಮಾರುತದಿಂದ ಮನೆಗಳಿಗೆ ಹಾನಿಯಾಗಿದೆ. ಮರಗಳು ನೆಲಕ್ಕೆ ಉರುಳಿವೆ. ರಾಜ್ಯದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಶುಕ್ರವಾರ ಮಳೆಯಿಂದ ಟಿನ್ಸುಕಿಯಾ ಜಿಲ್ಲೆಯಲ್ಲಿ ಮೂರು, ಬಾಕ್ಸಾದಲ್ಲಿ ಎರಡು ಮತ್ತು ದಿಬ್ರುಗಡದಲ್ಲಿ ಒಂದು ಸಾವು ಪ್ರಕರಣಗಳು ವರದಿಯಾಗಿವೆ. ಇಬ್ಬರು ಮಕ್ಕಳು ಸೇರಿ ಇನ್ನೂ ಎಂಟು ಸಾವು ಪ್ರಕರಣಗಳು ವರದಿಯಾಗಿವೆ ಎಂದುಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ಶನಿವಾರ ತಡರಾತ್ರಿ ವರದಿ ಮಾಡಿದೆ.
ಗುರುವಾರದಿಂದ ಉಂಟಾದ ಪ್ರವಾಹದಲ್ಲಿ ಸುಮಾರು 12 ಸಾವಿರ ಮನೆಗಳು ಮತ್ತು ಇತರ ಆಸ್ತಿ ಪಾಸ್ತಿಗಳು ಹಾನಿಗೀಡಾಗಿವೆ ಎಂದೂ ಅದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.