ಲಖನೌ: ಜೈಲಿನಲ್ಲಿರುವ ಪಾತಕಿ ಮತ್ತು ಮಾಜಿ ಸಂಸದ ಅತೀಕ್ ಅಹ್ಮದ್ ಹಾಗೂ ಅವರ ಪತ್ನಿ ಶೈಸ್ತಾ ಪರ್ವೀನ್ ಮಂಗಳವಾರ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷ ಸೇರಿದ್ದಾರೆ.
ಸಮಾಜವಾದಿ ಪಕ್ಷದ ಮಾಜಿ ನಾಯಕ ಅತೀಕ್ ಅವರ ಪತ್ನಿ ಶೈಸ್ತಾ ಪರ್ವೀನ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅತೀಕ್ ಅಹ್ಮದ್ ಅವರ ಗೈರುಹಾಜರಿಯಲ್ಲಿ ಓವೈಸಿಯವರ ಪಕ್ಷ ಸೇರ್ಪಡೆಯಾದರು.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಜಿನ್ನಾ ಜಿಹಾದಿ ಮನಸ್ಥಿತಿ ಅರಳಲು ಆಸ್ಪದ ನೀಡುವುದಿಲ್ಲ’ ಎಂದಿದೆ.
ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯ ಅಹ್ಮದ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಸಮರ್ಥಿಸಿಕೊಂಡ ಓವೈಸಿ, ಹಲವು ಮಂದಿ ಬಿಜೆಪಿ ನಾಯಕರು ಕೂಡ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದರು.
ಸಮಾಜವಾದಿ ಪಕ್ಷದ ಮಾಜಿ ನಾಯಕ ಅಹ್ಮದ್ ಮತ್ತು ಅವರ ಪತ್ನಿಯನ್ನು ಸಮಾಜವಾದಿ ಪಕ್ಷ ಕೀಳಾಗಿ ನಡೆಸಿಕೊಂಡಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮುಸ್ಲಿಮರನ್ನು ಗುಲಾಮರಂತೆ ಬಳಸಿಕೊಂಡಿವೆ ಎಂದು ಆರೋಪಿಸಿದರು.
‘ಉತ್ತರಪ್ರದೇಶದಲ್ಲಿ ಬಿಜೆಪಿಯಶೇ 37ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆ ಹೊಂದಿದ್ದಾರೆ. 116 ಬಿಜೆಪಿ ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ’ ಎಂದು ಓವೈಸಿ ಹೇಳಿದರು.
ಓವೈಸಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಕನೌಜ್ ಸಂಸದ ಸುಬ್ರತ್ ಪಾಠಕ್ ‘ಸಮುದಾಯಕ್ಕೆ ರಕ್ಷಣೆ ನೀಡುವ ನೆಪದಲ್ಲಿ ಅತೀಕ್ ಅಹ್ಮದ್ನಂತಹ ಕುಖ್ಯಾತರಿಗೆ ರಕ್ಷಣೆ ನೀಡುವುದು, ಆತನನ್ನು ಮತ್ತು ಆತನ ಪತ್ನಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಓವೈಸಿಯ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.