ADVERTISEMENT

ನಾಗರಿಕರ ಮೇಲಿನ ದಾಳಿ ಭಯೋತ್ಪಾದಕರ ಹತಾಶೆಯ ಪ್ರತೀಕ: ಡಿಜಿಪಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 14:19 IST
Last Updated 5 ಏಪ್ರಿಲ್ 2022, 14:19 IST
   

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಾಗರಿಕರ ಮೇಲೆ ನಡೆಯುತ್ತಿರುವ ದಾಳಿಗಳು ಪಾಕ್‌ ಪ್ರಾಯೋಜಿತವಾಗಿದ್ದು, ಅಮಾಯಕರ ಮೇಲಿನ ದಾಳಿಯು ಭಯೋತ್ಪಾದಕ ಗುಂಪುಗಳ ಹತಾಶೆಯ ಮನೋಭಾವವನ್ನು ತೋರಿಸುತ್ತಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್‌ ಸಿಂಗ್‌ ಹೇಳಿದರು.

ಶ್ರೀನಗರದ ಮೈಸುಮಾದ ಪ್ರದೇಶದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಸಿಆರ್‌ಪಿಎಫ್‌ ಯೋಧ ವಿಶಾಲ್‌ಕುಮಾರ್‌ ಅವರಿಗೆ ಮಂಗಳವಾರ ಗೌರವ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ‘ಇತ್ತೀಚೆಗೆ ಕಣಿವೆಯಲ್ಲಿ ನಡೆಯುತ್ತಿರುವ ನಾಗರಿಕರ ಮೇಲಿನ ದಾಳಿಯು ಖಂಡನೀಯ. ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ಹಾಗೂ ಕಣಿವೆಯನ್ನು ಶಾಂತಿಯನ್ನು ಖಾತ್ರಿಪಡಿಸುವಲ್ಲಿ ಭದ್ರತಾ ಪಡೆಗಳು ಬದ್ಧವಾಗಿವೆ. ಇಂತಹ ದುಷ್ಕೃತ್ಯಗಳನ್ನು ನಾವು ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಸೋಮವಾರ (ಏ.4) ಕಾಶ್ಮೀರದ ಪುಲ್ವಾಮ ಹಾಗೂ ಶ್ರೀನಗರ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಉಗ್ರರ ದಾಳಿಯಲ್ಲಿ ಯೋಧರೊಬ್ಬರು ಮೃತಪಟ್ಟು, ಇಬ್ಬರು ಬಿಹಾರದ ಕಾರ್ಮಿಕರು, ಕಾಶ್ಮೀರಿ ಪಂಡಿತ ಸಮುದಾಯದ ಅಂಗಡಿ ಮಾಲೀಕರೊಬ್ಬರು ಗಾಯಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.