ನವದೆಹಲಿ: ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಜಾಮೀನು ಅರ್ಜಿಯನ್ನು ಸ್ವೀಕರಿಸಿದ್ದಕ್ಕಾಗಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸೇರಿದಂತೆ ಸುಪ್ರೀಂಕೋರ್ಟ್ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕಾಗಿ 'ಸ್ಟ್ಯಾಂಡ್-ಅಪ್' ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಗುರುವಾರ ಒಪ್ಪಿಗೆ ನೀಡಿದ್ದಾರೆ.
ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಹಲವಾರು ಮನವಿಗಳು ಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ಕಾಮ್ರಾ ಅವರ ಟ್ವೀಟ್ಗಳು ಆಕ್ಷೇಪಾರ್ಹ ಮತ್ತು ಕೆಟ್ಟ ಅಭಿರುಚಿಯದ್ದು. ಕಾಮ್ರಾ ನ್ಯಾಯಾಂಗ ನಿಂದನೆ ಮತ್ತು ತಮಾಷೆ ನಡುವಿನ ರೇಖೆಯನ್ನು ಮೀರಿದ್ದಾರೆಎಂದು ಹೇಳಿದ್ದಾರೆ.
ಈಗಿನ ಜನರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸುಪ್ರೀಂಕೋರ್ಟ್ ಮತ್ತು ಅದರ ನ್ಯಾಯಾಧೀಶರನ್ನು ಧೈರ್ಯವಾಗಿ ಮತ್ತು ನಾಚಿಕೆ ಬಿಟ್ಟು ಖಂಡಿಸಬಹುದು ಎಂದು ನಂಬಿದ್ದಾರೆ. ಆದರೆ ಈ ರೀತಿಯ ಕೃತ್ಯಗಳು 1972 ನ್ಯಾಯಾಂಗ ನಿಂದನೆ ಕಾಯ್ದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದಿದ್ದಾರೆ ವೇಣುಗೋಪಾಲ್.
ಬುಧವಾರ ಮಧ್ಯಾಹ್ನ ಟ್ವೀಟ್ ಮಾಡಿದ ಕಾಮ್ರಾ ಹಲವು ವರ್ಷಗಳ ಹಿಂದೆಯೇ ಗೌರವವು ಈ ಕಟ್ಟಡವನ್ನು(ಸುಪ್ರೀಂಕೋರ್ಟ್)ಬಿಟ್ಟು ಹೋಗಿದೆ ಎಂದಿದ್ದರು. ಇನ್ನೊಂದು ಟ್ವೀಟ್ನಲ್ಲಿ ಸುಪ್ರೀಂಕೋರ್ಟ್ ಚಿತ್ರ ಶೇರ್ ಮಾಡಿ ದೇಶದ ಅತಿ ದೊಡ್ಡ ತಮಾಷೆ ಎಂದು ಬರೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.