ಅಯೋಧ್ಯೆ ರಾಮ ಮಂದಿರ
ಪಿಟಿಐ ಚಿತ್ರ
ಲಖನೌ: ಅಯೋಧ್ಯೆಯ ಸೌಲಭ್ಯ ಹೆಚ್ಚಿಸಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರ, ಆರು ಪ್ರಮುಖ ಪ್ರವೇಶ ದ್ವಾರಗಳನ್ನು ಪೂರ್ಣ ಪ್ರಮಾಣದ ಪ್ರವಾಸಿ ಸೇವಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
ಕಳೆದ ವರ್ಷ ಜನವರಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.
ಶ್ರೀರಾಮ, ಲಕ್ಷ್ಮಣ, ಭರತ, ಹನುಮಾನ್, ಗರುಡ ಮತ್ತು ಜಟಾಯು ದ್ವಾರಗಳಲ್ಲಿ ದ್ವಾರ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸೋಮವಾರ ಬಿಡುಗಡೆಯಾದ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಪ್ರತಿಯೊಂದು ದ್ವಾರಗಳಲ್ಲಿ, 3-ಸ್ಟಾರ್, 2-ಸ್ಟಾರ್ ಮತ್ತು ಬಜೆಟ್ ಹೋಟೆಲ್ಗಳು, ಅತಿಥಿಗೃಹಗಳು ಮತ್ತು ಪ್ರವಾಸೋದ್ಯಮ ಕಚೇರಿಗಳು, ಪ್ರವಾಸಿ ಸೌಲಭ್ಯ ಕೇಂದ್ರಗಳನ್ನು ನಿರ್ಮಿಸಲಾಗುವುದು.
ಸಂಕೀರ್ಣಗಳು ಕಲಾ ಮತ್ತು ಕರಕುಶಲ ಗ್ಯಾಲರಿಗಳು, ಫುಡ್ ಕೋರ್ಟ್ಗಳು, ಕೆಫೆಟೇರಿಯಾ, ರೆಸ್ಟೋರೆಂಟ್ಗಳು, ಆಂಫಿಥಿಯೇಟರ್ಗಳು, ಬಹು-ಹಂತದ ಪಾರ್ಕಿಂಗ್ ಸೌಲಭ್ಯಗಳು ಮತ್ತು ಇವಿ ಚಾರ್ಜಿಂಗ್ ಕೇಂದ್ರಗಳನ್ನು ಒಳಗೊಂಡಿರುತ್ತವೆ. ಇದು ಸಂದರ್ಶಕರಿಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ನೀಡುತ್ತದೆ ಎಂದು ಹೇಳಿಕೆ ತಿಳಿಸಿದೆ.
ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆಯನ್ನು ಅಂತಿಮಗೊಳಿಸಿದ್ದು, ಅಭಿವೃದ್ಧಿ ಯೋಜನೆಗಳ ಕೆಲಸವನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ಅದು ಹೇಳಿದೆ.
ಪ್ರವಾಸೋದ್ಯಮ ಇಲಾಖೆ ಸಿದ್ಧಪಡಿಸಿದ ನೀಲನಕ್ಷೆಯ ಪ್ರಕಾರ, ಈ ಆರು ಪ್ರವಾಸಿ ಸೌಲಭ್ಯ ಕೇಂದ್ರಗಳಲ್ಲಿ ಜಟಾಯು ಗೇಟ್ನಲ್ಲಿ ದೊಡ್ಡ ಪ್ರಮಾಣದ ಸೌಲಭ್ಯ ಇರಲಿದೆ.
ಅಂಬೇಡ್ಕರ್ ನಗರ ರಸ್ತೆಯಲ್ಲಿರುವ ಜಟಾಯು ಗೇಟ್ನಲ್ಲಿರುವ ಪ್ರವಾಸಿ ಕೇಂದ್ರವು 5.76 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ.
ಗೇಟ್ ಸಂಕೀರ್ಣಗಳು ಶೌಚಾಲಯ ಬ್ಲಾಕ್ಗಳು, ಪೆಟ್ರೋಲ್ ಮತ್ತು ಸಿಎನ್ಜಿ ಪಂಪ್ಗಳು ಮತ್ತು ತೆರೆದ ಮಂಟಪಗಳನ್ನು ಸಹ ಹೊಂದಿರುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.