ಲಖನೌ: ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ಭಗವಾನ್ ರಾಮನ ಜೀವನಗಾಥೆ ಸಾರುವ ನೂರು ವಿಗ್ರಹಗಳೊಂದಿಗೆ ಮೆರಮಣಿಗೆ ನಡೆಸಲಾಗುವುದು ಎಂದು ಶಿಲ್ಪಿ ರಂಜಿತ್ ಮಂಡಲ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀ ರಾಮರ ಜನನದಿಂದ ವನವಾಸದವರೆಗಿನ ಜೀವನ, ರಾವಣನ ವಿರುದ್ಧದ ವಿಜಯ ಹಾಗೂ ಯುದ್ಧದ ಬಳಿಕ ಅಯೋಧ್ಯೆಗೆ ಹಿಂದಿರುಗಿದ್ದು ಸೇರಿದಂತೆ ರಾಮಾಯಣ ಕಥೆ ಸಾರುವ ಅನೇಕ ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮೆರಮಣಿಗೆಯ ಕಾರ್ಯಕ್ರಮದ ಮೂಲಕ ರಾಮನ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಲಿದೆ. ‘ವಿಗ್ರಹಗಳನ್ನು ಸಿದ್ಧಪಡಿಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈಗಾಗಲೇ 60 ಪ್ರತಿಮೆಗಳನ್ನು ತಯಾರಿಸಲಾಗಿದೆ‘ ಎಂದು ಮುಖ್ಯ ಶಿಲ್ಪಿ ರಂಜಿತ್ ಮಂಡಲ್ ತಿಳಿಸಿದ್ದಾರೆ.
‘ಅಮೃತಶಿಲೆಯಿಂದ ನಿರ್ಮಿಸಲಾಗಿರುವ ಕಮಲದ ಹೂವಿನ ಮಾದರಿಯ ಪೀಠದ ಮೇಲೆ ಭಗವಾನ್ ರಾಮನ ಮೂರ್ತಿಯನ್ನು ಸ್ಥಾಪಿಸಲಾಗುವುದು. ಇದೇ ಮಾದರಿಯಲ್ಲಿಯೇ ಶ್ರೀರಾಮನ ಪೀಠವನ್ನು ಗರ್ಭಗುಡಿಯಲ್ಲಿಯೂ ಪ್ರತಿಷ್ಠಾಪಿಸಲಾಗುವುದು. ಪೀಠ ಅಥವಾ ಸಿಂಹಾಸನದ ಎತ್ತರವನ್ನು ನಿರ್ಧರಿಸಲಾಗಿದೆ. ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ಶ್ರೀರಾಮನ ಹಣೆಯನ್ನು ಸ್ಪರ್ಶಿಸಿದ ಬೆಳಕು ಗರ್ಭಗುಡಿಯನ್ನು ಬೆಳಗಲಿದೆ‘ ಎಂದು ಟ್ರಸ್ಟಿ ಅನಿಲ್ ಮಿಶ್ರಾ ಮಾಹಿತಿ ಹಂಚಿಕೊಂಡಿದ್ದಾರೆ.
ಜನವರಿ 22 ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ನೂರಾರು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.