ನವದೆಹಲಿ:‘ಕೋವಿಡ್–19 ಗುಣಪಡಿಸಲಿದೆ ಎಂದು ಹೇಳಿಕೊಂಡಿರುವ ಔಷಧ ವಿವರಗಳನ್ನು ಆದಷ್ಟು ಬೇಗ ಕೊಡಬೇಕು ಹಾಗೂ ಪರಿಶೀಲನೆಯವರೆಗೂ ಈ ಉತ್ಪನ್ನ ಕುರಿತು ಜಾಹೀರಾತು ನೀಡಬಾರದು’ ಎಂದು ಆಯುಷ್ ಸಚಿವಾಲಯ ತಾಕೀತು ಮಾಡಿದೆ.
ಕೊರೊನಿಲ್ ಮತ್ತು ಸ್ವಸರಿ ಔಷಧ ಬಿಡುಗಡೆ ಮಾಡಿದ್ದ ಪತಂಜಲಿ, ಇದು ಕೋವಿಡ್ ಗುಣಪಡಿಸಲಿದೆ ಎಂದು ಹೇಳಿತ್ತು. ಆದರೆ ಸಚಿವಾಲಯ, ‘ಈ ಪ್ರತಿಪಾದನೆಯ ಹಿಂದಿನ ವಿವರ ಹಾಗೂ ವೈಜ್ಞಾನಿಕ ಅಧ್ಯಯನದ ಮಾಹಿತಿ ಇಲ್ಲ‘ ಎಂದು ಹೇಳಿದೆ.
ಔಷಧದ ಪ್ರಯೋಗ ನಡೆದ ಆಸ್ಪತ್ರೆ, ಸ್ಥಳ, ಬಳಸಲಾದ ಔಷಧದ ಪ್ರಮಾಣ ಕುರಿತ ವಿವರಗಳನ್ನು ಒದಗಿಸಬೇಕು ಎಂದು ಸಚಿವಾಲಯವು ಪತಂಜಲಿ ಸಂಸ್ಥೆಗೆ ಸೂಚಿಸಿದೆ.
ಜಗತ್ತಿನಾದ್ಯಂತ ವಿಜ್ಞಾನಿಗಳು ಕೋವಿಡ್–19ಕ್ಕೆ ಪರಿಣಾಮಕಾರಿ ಔಷಧ ಪತ್ತೆ ಹಚ್ಚಲು ಕಸರತ್ತು ನಡೆಸಿರುವಾಗಲೇ, ಯೋಗ ಗುರು ರಾಮ್ದೇವ್ ಅವರು, ಪತಂಜಲಿ ಸಂಸ್ಥೆಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಬಲ್ಲ ಆಯುರ್ವೇದ ಔಷಧಿಯನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದ್ದರು.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಅವರು,‘ಕೊರೊನಿಲ್’ ಮತ್ತು ‘ಸ್ವಸರಿ’ ಹೆಸರಿನ ಈ ಔಷಧಗಳನ್ನು ಕೋವಿಡ್ ಪೀಡಿತ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ.ಈ ಔಷಧಗಳು ಏಳು ದಿನಗಳಲ್ಲಿ ಶೇ.100ರಷ್ಟು ಫಲಿತಾಂಶ ನೀಡಿವೆ’ ಎಂದು ತಿಳಿಸಿದ್ದರು.
‘ಕೊರೊನಾ ಸೋಂಕು ಬಾಧಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿಯೂ ಈ ಔಷಧವನ್ನು ಸೇವಿಸಬಹುದು. ಇದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧಿಯಲ್ಲ. ಕೊರೊನಾ ಸೋಂಕು ನಿವಾರಿಸುವ ಔಷಧ’ ಎಂದೂ ಹೇಳಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.