ಲಖನೌ: ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರನ್ನು ಶೀಘ್ರದಲ್ಲೇ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಭೂ ಕಬಳಿಕೆಯೂ ಸೇರಿದಂತೆ ಖಾನ್ ವಿರುದ್ಧ ಉತ್ತರಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಾರು ದೂರುಗಳು ದಾಖಲಾಗಿದ್ದು, ಸರ್ಕಾರವೂ ‘ಭೂ ಮಾಫಿಯಾ’ಗಳ ಪಟ್ಟಿಯಲ್ಲಿ ಆಜಂ ಅವರ ಹೆಸರನ್ನು ಪ್ರಕಟಿಸಿತ್ತು.
ಆಜಂ ಅವರ ಬಂಧನ ಸಾಧ್ಯತೆಯ ಬಗ್ಗೆ ಸೂಚನೆ ನೀಡಿರುವ ರಾಂಪುರ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಅವರ ವಿರುದ್ಧ ಬಂದಿರುವ ಆರೋಪಗಳು ಗಂಭೀರವಾಗಿದ್ದು, ಬಂಧನಕ್ಕೆ ಅರ್ಹವಾದವುಗಳಾಗಿವೆ’ ಎಂದಿದ್ದಾರೆ.
ರಾಂಪುರಕ್ಕೆ ಬಂದಾಗ ಅವರನ್ನು ಬಂಧಿಸುವಿರೋ ಅಥವಾ ಪೊಲೀಸರನ್ನು ಅವರಿದ್ದಲ್ಲಿಗೆ ಕಳುಹಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಟಿ, ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಗ್ಗೆಯೂ ರಾಂಪುರ ಠಾಣೆಯ ಪೊಲೀಸರು ದೂರು ದಾಖಲಿಸಿದ್ದರು. ಇದಲ್ಲದೆ ಆಜಂ ಅವರು ತಮ್ಮ ಕೃಷಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ 25ಕ್ಕೂ ಹೆಚ್ಚು ರೈತರು ಇತ್ತೀಚೆಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.