
ಬದರಿನಾಥ ದೇಗುಲ
ಪಿಟಿಐ ಚಿತ್ರ
ಗೋಪೇಶ್ವರ: ಚಳಿಗಾಲ ಆರಂಭವಾದ ಕಾರಣ ಉತ್ತರಾಖಂಡದ ಬದರಿನಾಥ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ. ಈ ಮೂಲಕ ಈ ವರ್ಷದ ಚಾರ್ಧಾಮ್ ಯಾತ್ರೆ ಮಂಗಳವಾರ ಮುಕ್ತಾಯವಾಗಿದೆ.
ವಿಶೇಷ ಪೂಜೆ ಬಳಿಕ ಬದರಿನಾಥ ದೇಗುಲವನ್ನು ಮಧ್ಯಾಹ್ನ 2.56ಕ್ಕೆ ಮುಚ್ಚಲಾಗಿದೆ ಎಂದು ಬದರಿನಾಥ– ಕೇದಾರನಾಥ ದೇಗುಲ ಸಮಿತಿ ಹೇಳಿದೆ. ಈ ವೇಳೆ ಚಳಿಯ ವಾತಾವರಣದ ನಡುವೆಯೂ ದೇಶ–ವಿದೇಶಗಳಿಂದ ಬಂದಿದ್ದ ಭಕ್ತರು ಹಾಜರಿದ್ದರು ಎಂದೂ ಸಮಿತಿ ತಿಳಿಸಿದೆ.
ದೇವಾಲಯವನ್ನು ಹಳದಿ ಮತ್ತು ಕೇಸರಿ ಬಣ್ಣದ ಚೆಂಡುಹೂವಿನಿಂದ ಅಲಂಕರಿಸಲಾಗಿತ್ತು. ದೇಗುಲದ ಎದುರು ಬೆಳಿಗ್ಗೆಯಿಂದಲೇ ಜಾನಪದ ನೃತ್ಯ, ಭಜನೆ, ಕೀರ್ತನೆಗಳು ನಡೆಯುತ್ತಿದ್ದವು.
ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಧಾಮಗಳು ಕಳೆದ ತಿಂಗಳು ಬಾಗಿಲು ಮುಚ್ಚಿತ್ತು. ಈಗ ಬದರಿನಾಥ ದೇಗುಲದ ಬಾಗಿಲು ಮುಚ್ಚುವ ಮೂಲಕ ಚಾರ್ಧಾಮ್ ಯಾತ್ರೆ ಮುಕ್ತಾಯಗೊಂಡಿದೆ.
ಪ್ರತಿ ವರ್ಷ ತೀವ್ರ ಚಳಿ ಮತ್ತು ಭಾರಿ ಹಿಮಪಾತವಾಗುವ ಕಾರಣ ಪ್ರತಿ ವರ್ಷ ಅಕ್ಟೋಬರ್ –ನವೆಂಬರ್ನಲ್ಲಿ ಹಿಮಾಲಯದಲ್ಲಿರುವ ಈ ದೇಗುಲಗಳ ಬಾಗಿಲನ್ನು ಮುಚ್ಚಲಾಗುತ್ತದೆ. ಏಪ್ರಿಲ್–ಮೇ ತಿಂಗಳಲ್ಲಿ ಬಾಗಿಲು ತೆರೆಯಲಾಗುತ್ತದೆ.
ಈ ವರ್ಷ ಮೇ ತಿಂಗಳಿನಿಂದ ಆರಂಭವಾದ ಯಾತ್ರೆಯಲ್ಲಿ ದೇಶ– ವಿದೇಶಗಳಿಂದ 51 ಲಕ್ಷ ಭಕ್ತರು ಪಾಲ್ಗೊಂಡಿದ್ದರು. 6.44 ಲಕ್ಷ ಯಮುನೋತ್ರಿಗೆ, 7.58 ಲಕ್ಷ ಗಂಗೋತ್ರಿ, 17.68 ಲಕ್ಷ ಕೇದಾರನಾಥ ಮತ್ತು 16.52 ಲಕ್ಷ ಭಕ್ತರು ಬದರಿನಾಥಕ್ಕೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.