ಅಗರ್ತಲಾ (ಪಿಟಿಐ): ತನ್ನ ನೆಚ್ಚಿನ ಚಾಕೋಲೆಟ್ ಖರೀದಿಸಲು ಅತಿಕ್ರಮವಾಗಿ ಭಾರತದ ಗಡಿ ಪ್ರವೇಶ ಮಾಡಿದ್ದ ಬಾಂಗ್ಲಾದೇಶದ ಯುವಕನನ್ನು ಗಡಿ ಭದ್ರತೆ ಪಡೆ (ಬಿಎಸ್ಎಫ್) ಬಂಧಿಸಿದೆ.
ಬಾಂಗ್ಲಾದೇಶದಶಾಲ್ಡಾ ನದಿ ಸಮೀಪ ಗ್ರಾಮದ ಎಮಾನ್ ಹೊಸೈನ್ ಬಂಧಿತ ಯುವಕ. ಆಗಾಗ್ಗೆ ತನಗೆ ಇಷ್ಟದ ಭಾರತದ ಚಾಕೋಲೆಟ್ ಖರೀದಿಸಲು ಈಜಿಕೊಂಡು ನದಿ ಮೂಲಕ ತ್ರಿಪುರದ ಸಿಪಹಿಜಲ ಜಿಲ್ಲೆಗೆ ಬರುತ್ತಿದ್ದ. ಮುಳ್ಳುತಂತಿ ಬೇಲಿ ದಾಟಿ ಕಲಾಂಚೂರು ಗ್ರಾಮದಲ್ಲಿ ಚಾಕೋಲೆಟ್ ಖರೀದಿಸಿ ವಾಪಸ್ಸು ತೆರಳುತ್ತಿದ್ದ. ಯಾವುದೇ ದಾಖಲೆ ಇಲ್ಲದೆ ಭಾರತ ಗಡಿ ಪ್ರವೇಶಮಾಡಿದ್ದಕ್ಕಾಗಿ ಯುವಕನನ್ನು ಏ.14 ರಂದು ಬಿಎಸ್ಎಫ್ ಬಂಧಿಸಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದೆ. 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸೊನಾಮುರಾದ ಡಿಎಸ್ಪಿ ಬಾನೋಜ್ ದಾಸ್ ತಿಳಿಸಿದ್ದಾರೆ.
ತನಿಖೆ ನಡೆಸಲಾಗುತ್ತಿದ್ದು, ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಯುವಕನ ಕುಟುಂಬದವರು ಇದುವರೆಗೆ ಭಾರತದ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ದಿನಸಿ ಪದಾರ್ಥ ಖರೀದಿಸಲು ಹಾಗೂ ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಾಂಗ್ಲಾದೇಶದ ಜನರು ಆಗಾಗ್ಗೆ ಭಾರತಕ್ಕೆ ಬರುತ್ತಿರುತ್ತಾರೆ. ಗಡಿ ಭದ್ರತೆ ಪಡೆ ಮಾನವೀಯ ನೆಲೆಯಲ್ಲಿ ವಿನಾಯಿತಿ ನೀಡುತ್ತದೆ. ಕಳ್ಳಸಾಗಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಆದರೆ ಈ ಯುವಕ ನನಗೆ ತಿಳಿದಂತೆ ಚಾಕೋಲೆಟ್ ಖರೀದಿಸಲು ಮಾತ್ರ ಬಂದಿದ್ದ ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.