ತಿರುಚನಾಪಳ್ಳಿ: ಮೃತಪಟ್ಟ ಗ್ರಾಹಕರೊಬ್ಬರ ಖಾತೆಯಲ್ಲಿದ್ದ ₹ 25.8 ಲಕ್ಷ ವಂಚಿಸಿದ ಆರೋಪದ ಮೇಲೆ ರಾಷ್ಟ್ರೀಕೃತ ಬ್ಯಾಂಕಿನ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.
ಇಂಡಿಯನ್ ಓವರ್ಸೀಸ್ ಬ್ಯಾಂಕಿನ ವಲಯ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಬ್ಯಾಂಕಿನ ವಯಲೂರು ಶಾಖೆಯ ವ್ಯವಸ್ಥಾಪಕ ಶೇಖ್ ಮೊಹಿದೀನ್ ಮತ್ತು ಸಹಾಯಕ ವ್ಯವಸ್ಥಾಪಕ ಚಿನ್ನದುರೈ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಮಿಸೋಲಾ ಎಂಬುವರ ಖಾತೆಯಲ್ಲಿ ಈ ಹಣವಿತ್ತು. ಅವರು ಮೃತಪಟ್ಟ ನಂತರ ಈ ಹಣ ಪಡೆಯಲು ಬ್ಯಾಂಕನ್ನು ಯಾರೂ ಸಂಪರ್ಕ ಮಾಡಿರಲಿಲ್ಲ. ಕೆಲವು ವರ್ಷಗಳ ನಂತರ ಎಮಿಸೋಲಾ ಅವರ ಖಾತೆಯಲ್ಲಿದ್ದ ಹಣ ಪಡೆಯಲು ಖೊಟ್ಟಿ ಸಹಿ ಮಾಡಿ ಮೊಹದೀನ್ ಮತ್ತು ಚಿನ್ನದುರೈ ಖಾತೆಯನ್ನು ನವೀಕರಿಸಿದ್ದರು. ಅವರ ಹೆಸರಲ್ಲಿ ಎಟಿಎಂ ಕಾರ್ಡ್ ಪಡೆದು ಖಾತೆಯಲ್ಲಿದ್ದ ಹಣವನ್ನು ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಡಿಟ್ ಪರಿಶೀಲನೆ ಸಂದರ್ಭದಲ್ಲಿ ಹಣ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರೂ ಅಧಿಕಾರಿಗಳ ವಿರುದ್ಧ ಪಿತೂರಿ, ನಕಲಿ ದಾಖಲೆಗಳ ಸೃಷ್ಟಿ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.