ನವದೆಹಲಿ: ನದಿ ಪಾತ್ರಗಳಲ್ಲಿ ಭಾರಿ ಗಾತ್ರದ ಯಂತ್ರೋಪಕರಣಗಳನ್ನು ಬಳಸಿ ಗಣಿಗಾರಿಕೆ ಮಾಡಲು ಗುತ್ತಿಗೆದಾರರಿಗೆ ಅನುಮತಿ ನೀಡದಿರಲು ಕರ್ನಾಟಕ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ಸೂಚಿಸಿದೆ.
‘ಮರಳು ಗಣಿಗಾರಿಕೆಗೆಭಾರಿ ಯಂತ್ರೋಪಕರಣಗಳನ್ನು ಬಳಸುವಂತಿಲ್ಲ ಎಂದು ಮರಳು ಗಣಿಗಾರಿಕೆಗೆ ಅನುಮತಿ ನೀಡುವ ವೇಳೆಯೇ ಸಂಬಂಧಪಟ್ಟ ಇಲಾಖೆ ಗುತ್ತಿಗೆದಾರರಿಗೆ ಕಡ್ಡಾಯವಾಗಿ ತಿಳಿಸಬೇಕು. ಭವಿಷ್ಯದಲ್ಲಿ ಗುತ್ತಿಗೆ ಕರಾರು ಪತ್ರ ರಚಿಸುವಾಗ ಅಧಿಕಾರಿಗಳು ಎಚ್ಚರಿಕೆಯಿಂದ ರಚಿಸಬೇಕು’ ಎಂದು ಎನ್ಜಿಟಿಯ ದಕ್ಷಿಣ ಪೀಠ ಹೇಳಿದೆ. ವಿಜಯಪುರದ ಶಾಸಕ ಸಾರ್ವಭೌಮ ಬಗಲಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ರಾಮಕೃಷ್ಣನ್ ನೇತೃತ್ವದ ಎನ್ಜಿಟಿ ದಕ್ಷಿಣ ಪೀಠ ಈ ಆದೇಶ ಹೊರಡಿಸಿದೆ.
‘ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜೋಳದಹಡ್ಗಿ ಗ್ರಾಮದ ಬಳಿ ಕೃಷ್ಣಾ ನದಿ ತೀರದಲ್ಲಿ ಎರಡು ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕಾಗಿ ಜೆಸಿಬಿ ಸೇರಿ ಇತರ ದೊಡ್ಡ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ತಡೆ ಸಚಿವಾಲಯ ನೀಡಿರುವ ಮಾರ್ಗಸೂಚಿಯ ಉಲ್ಲಂಘನೆ ಆಗಿದೆ’ ಎಂದು ಸಾರ್ವಭೌಮ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಲಾಗಿತ್ತು.
ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಗಣಿಗಾರಿಕೆ ಮತ್ತು ಭೂಗರ್ಭಶಾಸ್ತ್ರ ಇಲಾಖೆಗೆ ಎನ್ಜಿಟಿ ನಿರ್ದೇಶನ ನೀಡಿದೆ.
ನಿಯಮ ಉಲ್ಲಂಘಿಸಿದವರಿಗೆದಂಡ ವಿಧಿಸಲು ಈಗಾಗಲೇ ಜಂಟಿಸಮಿತಿ ರಚಿಸಲಾಗಿದೆ. ಸಮಿತಿ ವಿಧಿಸುವ ದಂಡದ ಜೊತೆ, ಗಣಿಗಾರಿಕೆಗೆ ಅನುಮತಿ ನೀಡಲಾಗಿರುವ ಪ್ರದೇಶದಿಂದ ಹೊರಗೆ ಗಣಿಗಾರಿಕೆ ನಡೆಸಿದವರಿಂದ ಪರಿಸರ ಪರಿಹಾರ ಮೊತ್ತ ವಸೂಲಿ ಮಾಡುವಂತೆ ಗಣಿಗಾರಿಕೆ ಇಲಾಖೆಗೆ ಎನ್ಜಿಟಿ ನಿರ್ದೇಶನ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.