ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಪಾಕಿಸ್ತಾನದ ಭಯೋತ್ಪಾದಕರು ಹತರಾಗಿದ್ದು, ಪೊಲೀಸರೊಬ್ಬರು ಸಾವನ್ನಪ್ಪಿದ್ದಾರೆ.
’ಬುಧವಾರ ದೆಹಲಿಯ ಪಟಿಯಾಲ ನ್ಯಾಯಾಲಯವು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಅಧ್ಯಕ್ಷ ಯಾಸಿನ್ ಮಲಿಕ್ ಶಿಕ್ಷೆಯನ್ನು ಘೋಷಣೆ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಾದ್ಯಂತ ನಾಕಾಬಂಧಿ ಹಾಕಲಾಗಿತ್ತು.ಈ ನಡುವೆ ಕ್ರೀರಿ ಪ್ರದೇಶದ ನಜೀಭಟ್ ಕ್ರಾಸಿಂಗ್ ಬಳಿಯ ನಾಕಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಪಾಕಿಸ್ತಾನದ ಜೈಶೆ–ಮೊಹಮ್ಮದ್ (ಜೆಇಎಂ) ಸಂಘಟನೆಯ ಭಯೋತ್ಪಾದಕರು ಹತರಾದರು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಮುದಾಸೀರ್ ಅಹ್ಮದ್ ಅವರು ಕೂಡ ಜೀವ ಕಳೆದುಕೊಂಡಿದ್ದಾರೆ’ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಕಳೆದ ಮೂರ್ನಾಲ್ಕು ತಿಂಗಳಿಂದ ಪ್ರಸಿದ್ಧ ಗುಲ್ಮಾರ್ಗ್ನ ಗುಡ್ಡಗಾಡು ಪ್ರದೇಶದಲ್ಲಿ ಸಕ್ರಿಯರಾಗಿದ್ದ ಈ ಮೂವರು ಭಯೋತ್ಪಾದಕರು ಯೋಜಿತ ದೊಡ್ಡ ದಾಳಿಯನ್ನು ನಡೆಸುವ ಸಲುವಾಗಿ ಶ್ರೀನಗರಕ್ಕೆ ಬಂದಿರಬಹುದು. ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.