ADVERTISEMENT

ಗಂಗಾ: ಪುನಶ್ಚೇತನಕ್ಕೆ ಅಣೆಕಟ್ಟುಗಳೇ ಅಡ್ಡಿ!

ಪಿಟಿಐ
Published 24 ನವೆಂಬರ್ 2018, 20:00 IST
Last Updated 24 ನವೆಂಬರ್ 2018, 20:00 IST
ಗಂಗಾ ನದಿ
ಗಂಗಾ ನದಿ    

ನವದೆಹಲಿ: ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 940 ಅಣೆಕಟ್ಟುಗಳು ಹಾಗೂ ತಡೆಗೋಡೆಗಳು ನದಿಯ ಪುನಶ್ಚೇತನ ಹಾಗೂ ನೀರಿನ ಸ್ವಾಭಾವಿಕ ಹರಿವಿಗೆ ಅಡ್ಡಿಯಾಗಿದೆ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟರು.

‘ಭಾರತ ಗಂಗಾ ನದಿಯನ್ನು ಪುನಶ್ಚೇತನಗೊಳಿಸಬಲ್ಲದು’ ಕಾರ್ಯಕ್ರಮದಲ್ಲಿ ಮಾತನಾಡಿದ ತಜ್ಞರು, ಗಂಗಾ ನದಿಯನ್ನು ಪುನಶ್ಚೇತನಗೊಳಿಸಿ, ನೀರಿನ ಹರಿವನ್ನು ಸರಾಗಗೊಳಿಸಬೇಕು. ತ್ಯಾಜ್ಯವು ನದಿಯನ್ನು ಸೇರದಂತೆ ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಗಂಗಾ ಶುದ್ಧೀಕರಣಕ್ಕೆ ಪ್ರಾಮುಖ್ಯ ನೀಡುತ್ತಿದೆಯೇ ಹೊರತು ಅದರ ಪುನಶ್ಚೇತನಕ್ಕಲ್ಲ. ನೀರಿನ ನೈಸರ್ಗಿಕ ಹರಿವನ್ನು ಸುಧಾರಿಸುವುದೇ ನದಿಯ ಕಾಯಕಲ್ಪಕ್ಕಿರುವ ಪ್ರಮುಖ ಮಾರ್ಗ’ ಎಂದು ನೀರು ನಿರ್ವಹಣಾ ತಜ್ಞ ರವಿ ಚೋಪ್ರಾ ಹೇಳಿದರು.

ADVERTISEMENT

ಪರಿಸರವಾದಿ ಮನೋಜ್‌ ಮಿಶ್ರಾ, ‘ನಗರಗಳು ಹಾಗೂ ಕಾರ್ಖಾನೆಗಳ ತ್ಯಾಜ್ಯ ನದಿಯ ಮಲಿನಕ್ಕೆ ಪ್ರಮುಖ ಕಾರಣ. ಶೇ 80ರಷ್ಟು ಮಾಲಿನ್ಯ ಚರಂಡಿ ನೀರಿನಿಂದಾಗಿ ಉಂಟಾಗುತ್ತಿದೆ. ನದಿಯನ್ನು ಸೇರುವ ಶೇ 52 ರಷ್ಟು ಚರಂಡಿ ನೀರು ಸಂಸ್ಕರಣೆಗೊಂಡಿರುವುದಿಲ್ಲ’ ಎಂದು ತಿಳಿಸಿದರು.

‘ಉತ್ತರ ಪ್ರದೇಶದಿಂದ ಅತಿಹೆಚ್ಚು ಅಂದರೆ, 761 ಟನ್‌ ನಗರ ತ್ಯಾಜ್ಯ ಪ್ರತಿನಿತ್ಯ ನದಿಯನ್ನು ಸೇರುತ್ತಿದೆ. ಬಿಹಾರದಿಂದ 99.50 ಟನ್‌ ಹಾಗೂ ಪಶ್ಚಿಮ ಬಂಗಾಳದಿಂದ 97 ಟನ್‌ ತ್ಯಾಜ್ಯ ನಿತ್ಯ ನದಿಯನ್ನು ಸೇರುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಮಾಜಿ ಕಾರ್ಯದರ್ಶಿ ಶಶಿ ಶೇಖರ್‌, ‘ನದಿ ನೀರಿನ ಮಲಿನವನ್ನು ಕಡಿಮೆ ಮಾಡುವುದು, ತ್ಯಾಜ್ಯ ಸೇರದಂತೆ ಎಚ್ಚರವಹಿಸುವುದರಿಂದ ನೀರಿನ ಹರಿಯುವಿಕೆಯನ್ನು ಸರಾಗಗೊಳಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.