ADVERTISEMENT

ಶೌಚಾಲಯಗಳ ಅಗತ್ಯ ಪ್ರತಿಪಾದಿಸಿದ ಪ್ರಧಾನಿ ಮೋದಿ ಮಾತ್ರ: ಕೋವಿಂದ್‌

ಪಿಟಿಐ
Published 2 ಏಪ್ರಿಲ್ 2023, 14:44 IST
Last Updated 2 ಏಪ್ರಿಲ್ 2023, 14:44 IST
ನವದೆಹಲಿಯಲ್ಲಿ ಭಾನುವಾರ ಆರಂಭವಾದ ನೈರ್ಮಲ್ಯದ ಸಮಾಜವಿಜ್ಞಾನ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸುಲಭ್‌ ನೈರ್ಮಲ್ಯ ಸಂಸ್ಥಾಪಕ ಬಿಂದೇಶ್ವರ್‌ ಪಾಠಕ್ ಕುರಿತ ಪುಸ್ತಕ ಬಿಡುಗಡೆ ಮಾಡಿದರು – ಪಿಟಿಐ ಚಿತ್ರ
ನವದೆಹಲಿಯಲ್ಲಿ ಭಾನುವಾರ ಆರಂಭವಾದ ನೈರ್ಮಲ್ಯದ ಸಮಾಜವಿಜ್ಞಾನ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸುಲಭ್‌ ನೈರ್ಮಲ್ಯ ಸಂಸ್ಥಾಪಕ ಬಿಂದೇಶ್ವರ್‌ ಪಾಠಕ್ ಕುರಿತ ಪುಸ್ತಕ ಬಿಡುಗಡೆ ಮಾಡಿದರು – ಪಿಟಿಐ ಚಿತ್ರ   

ನವದೆಹಲಿ: ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಯಾವೊಬ್ಬ ಪ್ರಧಾನಿಯೂ ದೇಶದಲ್ಲಿ ಶೌಚಾಲಯಗಳ ನಿರ್ಮಾಣದ ಅಗತ್ಯವನ್ನು ಒತ್ತಿಹೇಳಲಿಲ್ಲ ಎಂದು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದರು.

ಭಾನುವಾರ ಇಲ್ಲಿ ಆರಂಭವಾದ ನೈರ್ಮಲ್ಯ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು ‘ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಾಗಿ ಸ್ವಚ್ಛತೆಯೂ ಅಗತ್ಯವೆಂಬುದು ರಾಷ್ಟ್ರಪಿತ ಗಾಂಧೀಜಿಯವರ ನಂಬಿಕೆಯಾಗಿತ್ತು. ಅವರು ಸ್ವಾತಂತ್ರ್ಯ ಮತ್ತು ಸ್ವಚ್ಛತೆಗೆ ಸಮಾನ ಆದ್ಯತೆ ನೀಡಿದ್ದರು. ಅವರ ನಂತರ, ಯಾರಾದರೂ ಸ್ವಚ್ಛತೆಯ ಮಹತ್ವವನ್ನು ಹೆಚ್ಚು ಅರಿತಿದ್ದರೆ, ಅದು ಮೋದಿ ಮಾತ್ರ. ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ ರಾಷ್ಟ್ರಪತಿ ಭವನದ ಕೆಂಪುಕೋಟೆಯಿಂದ ಮಾತನಾಡಿದ ಮೊದಲ ಪ್ರಧಾನಿಯೂ ಮೋದಿಯೇ ಆಗಿದ್ದಾರೆ. ಅದಕ್ಕೂ ಮೊದಲು ಯಾರೊಬ್ಬರೂ ಈ ಬಗ್ಗೆ ಮಾತನಾಡಿರಲಿಲ್ಲ. ಕೆಲವರು ಮೋದಿ ಅವರ ಈ ಕಳಕಳಿಯನ್ನು ಗೇಲಿ ಮಾಡಿದ್ದರು’ ಎಂದು ಕೋವಿಂದ್‌ ಹೇಳಿದರು.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ತೀರತ್ ಸಿಂಗ್ ಠಾಕೂರ್, ವಿಶ್ವವಿದ್ಯಾಲಯಗಳಲ್ಲಿ ವಿದ್ವಾಂಸರು ನೈರ್ಮಲ್ಯ ಕುರಿತ ಸಮಾಜವಿಜ್ಞಾನ ಅಧ್ಯಯನಕ್ಕೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ADVERTISEMENT

ನೈರ್ಮಲ್ಯ ಕುರಿತ ಮೋದಿ ಅವರ ಸಂದೇಶವನ್ನು ಸಮ್ಮೇಳನದಲ್ಲಿ ಓದಲಾಯಿತು. ದೆಹಲಿಯ ಸುಲಭ್‌ ಇಂಟರ್ ನ್ಯಾಷನಲ್‌ನ ಸೋದರ ಸಂಸ್ಥೆ ಸುಲಭ್ ಇಂಟರ್‌ನ್ಯಾಷನಲ್‌ ಸ್ಕೂಲ್ ಆಫ್ ಆಕ್ಷನ್ ಸೋಶಿಯಾಲಜಿ ಆಯೋಜಿಸಿರುವ ಮೂರು ದಿನಗಳ ಸಮ್ಮೇಳನದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಪ್ರಾಧ್ಯಾಪಕರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.