
ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಬಗ್ಗೆ ಶನಿವಾರ ಬಸ್ತಾರ್ನಲ್ಲಿ ವಲಯ ಐಜಿಪಿ ಸುಂದರರಾಜ್ ಪಟ್ಟಿಲಿಂಗಮ್ ಅವರು ಮಾಹಿತಿ ನೀಡಿದರು
ಪಿಟಿಐ ಚಿತ್ರ
ಸುಕ್ಮಾ/ಬಿಜಾಪುರ: ಛತ್ತೀಸಗಢದ ಬಸ್ತಾರ್ ವಲಯಕ್ಕೆ ಸೇರಿದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು 14 ನಕ್ಸಲರನ್ನು ಹತ್ಯೆ ಮಾಡಿವೆ.
ಹತರಾದವರಲ್ಲಿ ಪೊಲೀಸರಿಗೆ ಬಹುದಿನಗಳಿಂದ ಬೇಕಿದ್ದ ನಕ್ಸಲ್ ನಾಯಕರಾದ ಮಾಂಗ್ಟು (ವಿಭಾಗೀಯ ಸಮಿತಿ ಸದಸ್ಯ) ಮತ್ತು ಹುಂಗಾ ಮಡ್ಕಾಮ್ ಸೇರಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸುಕ್ಮಾದ ದಕ್ಷಿಣ ಭಾಗದಲ್ಲಿ ಭದ್ರತಾ ಪಡೆಯ ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ತೆರಳಿದ್ದಾಗ ಗುಂಡಿನ ಚಕಮಕಿ ನಡೆದಿದೆ. ಮಾಂಗ್ಟು ಸೇರಿ 12 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಯಿತು.
ಬಿಜಾಪುರ ಜಿಲ್ಲೆಯ ಬಾಸಗುಡ ಸಮೀಪದ ಗಗನಪಲ್ಲಿ ಅರಣ್ಯದಲ್ಲಿ ಜಿಲ್ಲಾ ಮೀಸಲು ದಳ, ರಾಜ್ಯ ಪೊಲೀಸರು ಶನಿವಾರ ಮುಂಜಾನೆ ಕಾರ್ಯಾಚರಣೆ ನಡೆಸಿದರು. ಸ್ಥಳದಲ್ಲಿ ಹುಂಗಾ ಮಡ್ಕಾಮ್ ಸೇರಿ ಇಬ್ಬರ ಮೃತದೇಹ ಪತ್ತೆಯಾದವು. ಒಂದು ಎಸ್ಎಲ್ಆರ್ ಬಂದೂಕು, 12 ಗನ್ಗಳು ದೊರೆತಿವೆ ಎಂದು ಗೃಹ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವರ್ಷ ಛತ್ತೀಸಗಢದಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 285 ನಕ್ಸಲರು ಹತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.