
ರಾಯಪುರ: ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲರಿಂದ ಮುಕ್ತಗೊಂಡಿರುವ 41 ಹಳ್ಳಿಗಳಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಮೂಲಕ ಮೊದಲ ಬಾರಿಗೆ ಈ ಗ್ರಾಮಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ರಾಜ್ ಹೇಳಿದರು.
‘ಇದು ‘ಕೆಂಪು ಭಯೋತ್ಪಾದನೆ’ಯನ್ನು ಕೊನೆಗೊಳಿಸುವ ಹೋರಾಟದ ಯಶಸ್ಸನ್ನು ಒತ್ತಿ ಹೇಳುತ್ತದೆ ಹಾಗೂ ಶಾಂತಿ ಮತ್ತು ಅಭಿವೃದ್ಧಿಯನ್ನು ಸಾರುತ್ತದೆ. ದಶಕಗಳಿಂದ ಈ ಗ್ರಾಮಗಳಲ್ಲಿ ಯಾವುದೇ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗಿಲ್ಲ. ಇದೀಗ ಇವು ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಚೌಕಟ್ಟಿನೊಳಗೆ ಸಕ್ರಿಯವಾಗಲಿವೆ’ ಎಂದರು.
ಭದ್ರತಾ ಪಡೆಗಳ ನಿರಂತರ ಪ್ರಯತ್ನ ಹಾಗೂ ಸ್ಥಳೀಯರ ಸಹಕಾರದಿಂದ ಸಕಾರಾತ್ಮಕ ಪರಿವರ್ತನೆಯು ಸಾಧ್ಯವಾಗಿದೆ. ಕಳೆದ ವರ್ಷ, 13 ಗ್ರಾಮಗಳಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಇದರೊಂದಿಗೆ ಒಟ್ಟು 54 ಗ್ರಾಮಗಳಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆಯನ್ನು ಪ್ರಾರಂಭಿಸಲಾಗಿದೆ.
41 ಗ್ರಾಮಗಳ ಪೈಕಿ, 13 ಬಿಜಾಪುರ, 18 ನಾರಾಯಣಪುರ ಹಾಗೂ 10 ಗ್ರಾಮಗಳು ಸುಕ್ಮಾ ಜಿಲ್ಲೆಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.