ADVERTISEMENT

ಮಮತಾ ಬ್ಯಾನರ್ಜಿ ಜೊತೆ ಮಾತುಕತೆಗೆ ಸಿದ್ಧ: ಮುಷ್ಕರನಿರತ ವೈದ್ಯರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 12:10 IST
Last Updated 16 ಜೂನ್ 2019, 12:10 IST
   

ಕೊಲ್ಕತ್ತ: ಪಶ್ಚಿಮ ಬಂಗಾಳಸರ್ಕಾರದ ವಿರುದ್ಧ ವೈದ್ಯರುನಡೆಸುತ್ತಿರುವ ಪ್ರತಿಭಟನೆಯು ಆರನೇ ದಿನವಾದ ಭಾನುವಾರವೂ ಮುಂದುವರಿದಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ನಡೆಸಲು ಕಿರಿಯವೈದ್ಯರು ಒಪ್ಪಿಗೆ ಸೂಚಿಸಿದ್ದಾರೆ.

ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸೂಕ್ತ ಭದ್ರತೆ ಹಾಗೂ ದಾಳಿಕೋರರ ಮೇಲೆ ಅಗತ್ಯ ಕಾನೂನು ಕ್ರಮದ ಭರವಸೆ ನೀಡಿದ ಬಳಿಕವೇ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ನಡೆಸುವುದಾಗಿ ಅವರು ಷರತ್ತು ಹಾಕಿದ್ದಾರೆ.

ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವ ಮೂಲಕ ಈ ಬಿಕ್ಕಟ್ಟನ್ನು ತಕ್ಷಣವೇ ಕೊನೆಗಾಣಿಸಲು ನಾವು ಬಯಸುತ್ತೇವೆ.ಮುಚ್ಚಿದ ಬಾಗಿಲುಗಳು ಹಿಂದೆ ಸಂಧಾನ ನಡೆಯಬಾರದು, ಮಾತುಕತೆ ಪಾರದರ್ಶಕವಾಗಿರಬೇಕು ಮತ್ತು ಮಾಧ್ಯಮಗಳ ಕ್ಯಾಮೆರಾಗಳಎದುರು ಚರ್ಚೆ ನಡೆಯಬೇಕು ಇದಕ್ಕೆ ಸರ್ಕಾರ ಒಪ್ಪಿದರೆ ನಾವು ಮಾತುಕತೆಗೆ ಸಿದ್ಧ ಎಂದು ಕಿರಿಯ ವೈದ್ಯರು ಹೇಳಿದ್ದಾರೆ.

ADVERTISEMENT

ವೈದ್ಯರ ಕುರಿತ ತಮ್ಮ ನಿಲುವನ್ನು ಶನಿವಾರ ಬದಲಿಸಿಕೊಂಡಿದ್ದ ಮಮತಾ ಬ್ಯಾನರ್ಜಿ, ‘ವೈದ್ಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸುತ್ತೇವೆ. ಅವರ ವಿರುದ್ಧ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಗೊಳಿಸುವುದಿಲ್ಲ. ಎಲ್ಲರೂ ಸೇವೆಗೆ ಮರಳಬೇಕು. ವೈದ್ಯರು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಲು ಸರ್ಕಾರಕ್ಕೆ ಸಾಧ್ಯವಿದೆ. ಆದರೂ ಸರ್ಕಾರಒತ್ತಾಯಪೂರ್ವಕವಾಗಿ ಅದನ್ನು ಸಾಧಿಸುವುದಿಲ್ಲ’ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ಮೃತ ರೋಗಿಯೊಬ್ಬರ ಸಂಬಂಧಿಕರು ಇತ್ತೀಚೆಗೆ ಇಬ್ಬರು ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ವೈದ್ಯರನ್ನು ದೊಡ್ಡ ಮಟ್ಟದ ಚಳವಳಿಗೆ ದೂಡಿದೆ. ಈ ಮುಷ್ಕರ ದೇಶವನ್ನೇ ಆವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.