
ಕೋಲ್ಕತ್ತ: 10 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯು ಪ್ರಗತಿ ಕಾಣದಿರುವುದಕ್ಕೆ ಪಶ್ಚಿಮ ಬಂಗಾಳದ ಕುಲ್ತಾಲಿಯಲ್ಲಿನ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಲಕಿ ಸಾವಿಗೆ ನ್ಯಾಯ ಬೇಕು, ನಮಗೆ ‘ಲಕ್ಷ್ಮಿ ಭಂಡಾರ’ದ (ರಾಜ್ಯ ಸರ್ಕಾರದ ಆರ್ಥಿಕ ನೆರವಿನ ಯೋಜನೆ) ಅನುಕೂಲ ಬೇಡ ಎಂದು ಅವರು ಹೇಳಿದರು.
ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿಯ ಮಹಿಳೆಯರು ಅಲ್ಲಿನ ಅರಳಿ ಮರದ ಕೆಳಗೆ ಕುಳಿತು ನ್ಯಾಯ ಮತ್ತು ಹೆಣ್ಣುಮಕ್ಕಳ ರಕ್ಷಣೆಗಾಗಿ ದುರ್ಗಾ ಮಾತೆಯನ್ನು ಪ್ರಾರ್ಥಿಸಿದರು.
‘ನಮಗೆ ಲಕ್ಷ್ಮಿ ಭಂಡಾರ ಅಥವಾ ಕನ್ಯಾಶ್ರೀ ಯೋಜನೆಗಳು ಬೇಡ. ನಮ್ಮ ಮಕ್ಕಳಿಗೆ ರಕ್ಷಣೆ ಬೇಕು’ ಎಂದು ಅಲ್ಲಿ ನೆರೆದಿದ್ದ ಮಹಿಳೆಯೊಬ್ಬರು ಹೇಳಿದರು.
ಮತ್ತೊಬ್ಬ ಮಹಿಳೆ, ‘ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? ಸಂದೇಶ್ಖಾಲಿ ಪ್ರಕರಣ ಕಂಡೆವು, ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಲಾಯಿತು. ಈಗ ನಮ್ಮ ಮನೆಯ ಮಗಳನ್ನು ಕಳೆದುಕೊಂಡಿದ್ದೇವೆ’ ಎಂದು ಹೇಳಿದರು.
ಈ ಮಧ್ಯೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ದಳ ರಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣ ಸಂಬಂಧಿಸಿ ಈವರೆಗೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.