ಕೋಲ್ಕತ್ತ: ಪಶ್ಚಿಮ ಬಂಗಾಳ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಶುಕ್ರವಾರ ಮತ್ತಷ್ಟು ತಾರಕಕ್ಕೇರಿದೆ.
ʼಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದು ಸ್ಪಷ್ಟವಾಗಿದೆʼ ಎಂದು ರಾಜ್ಯಪಾಲ ಜಗದೀಪ್ ಧನ್ಖರ್ ಅವರು ಆರೋಪಿಸಿದ್ದಾರೆ.
ಬ್ಯಾನರ್ಜಿ ಅವರು ತಮಗೆ ಗುರುವಾರ ಬರೆದ ಪತ್ರವನ್ನು ಉಲ್ಲೇಖಿಸಿದ ಧನ್ಖರ್, ʼನಾನು ಸರ್ಕಾರದ ಆಡಳಿತದಲ್ಲಿ ಪದೇ ಪದೇ ಮಧ್ಯಪ್ರವೇಶಿಸುತ್ತಿದ್ದೇನೆ ಎಂದು ಅವರು ಆರೋಪ ಮಾಡಿರುವುದು ವಿಷಯದಿಂದ ಗಮನ ಬೇರೆಡೆ ಸೆಳೆಯುವ ತಂತ್ರವಾಗಿದೆ. ರಾಜ್ಯದಲ್ಲಿ ಕೋವಿಡ್-19 ಪಿಡುಗು ನಿರ್ವಹಿಸುವಲ್ಲಿ ತಾವು ವಿಫಲರಾಗಿರುವುದನ್ನು ಮರೆಮಾಚಲು ಅವರು ಹೀಗೆ ಮಾಡಿದ್ದಾರೆʼ ಎಂದು ಹೇಳಿದ್ದಾರೆ.
ರಾಜಕೀಯ ಹಾಗೂ ಸಂಘರ್ಷದ ವಿಧಾನವನ್ನು ಬಿಡಿ ಎಂದು ಮಮತಾಗೆ ಹೇಳಿರುವ ಅವರು, ʼನಿಜಾಮುದ್ದೀನ್ ಮರ್ಕಜ್ ಪ್ರಕರಣಕ್ಕೆ ಸಂಬಂಧಿಸಿ ನೀವು ಅಲ್ಪಸಂಖ್ಯಾತರನ್ನು ಓಲೈಸಿದ್ದು ಸ್ಪಷ್ಟವಾಗಿತ್ತು ಮತ್ತು ಅದು ಎಡವಟ್ಟಿನ ಸಂಗತಿ. ಇದು ತೀರಾ ದುರದೃಷ್ಟಕರʼ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.