ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇಂಥ ಕೃತ್ಯಗಳು ಕಾನೂನು ಸುವ್ಯವಸ್ಥೆಯ ಬಿಕ್ಕಟ್ಟನ್ನು ಹೆಚ್ಚಿಸುತ್ತಿರುವುದರ ಜತೆಗೆ ರಾಜ್ಯವು ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವಂಥ ಭಯದ ವಾತಾವರಣವನ್ನು ಸೃಷ್ಟಿಸುತ್ತಿವೆ ಎಂದಿದ್ದಾರೆ.
ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅಕ್ಟೋಬರ್ 10ರಂದು ಸಾಮೂಹಿಕ ಅತ್ಯಾಚಾರ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಸ್ ಈ ಹೇಳಿಕೆ ನೀಡಿದ್ದಾರೆ.
ದುರ್ಗಾಪುರಕ್ಕೆ ತೆರಳಿ ಸಂತ್ರಸ್ತೆ ಹಾಗೂ ಆಕೆಯ ಪೋಷಕರನ್ನು ಭೇಟಿಯಾಗಿ ಬಂದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿರುವ ಬೋಸ್, ‘ಪಶ್ಚಿಮ ಬಂಗಾಳವು ದುರ್ಬಲ ರಾಜ್ಯದ ಗುಣಲಕ್ಷಣಗಳನ್ನು ತೋರುತ್ತಿದೆ. ಕಾನೂನು ಇದ್ದರೂ, ಅದರ ಜಾರಿಯಲ್ಲಿ ವಿಫಲ್ಯ ಕಾಣುತ್ತಿದೆ’ ಎಂದು ಆರೋಪಿಸಿದ್ದಾರೆ.
ಇಂಥ ಬೆಳವಣಿಗೆಯಿಂದ ಯಾವುದೇ ನಾಗರಿಕ ಸಮಾಜಕ್ಕೆ ಒಳಿತಾಗುವುದಿಲ್ಲ. ಒಂದರ ಹಿಂದೆ ಮತ್ತೊಂದರಂತೆ ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದರೆ ಯಾರಿಗಾದರೂ ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತ ರಾಜ್ಯವಲ್ಲ ಎಂದೇ ಎನಿಸುತ್ತದೆ ಎಂದಿದ್ದಾರೆ.
ವಿದ್ಯಾರ್ಥಿನಿಯರನ್ನು ರಾತ್ರಿ ವೇಳೆ ಹೊರಗೆ ಕಳುಹಿಸದಂತೆ ವಸತಿ ಕಾಲೇಜುಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲಹೆ ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೋಸ್, ‘ಮಹಿಳೆಯರು ಯಾವಾಗ ಬೇಕಾದರೂ ಸ್ವತಂತ್ರ್ಯವಾಗಿ ಹೊರಗೆ ಓಡಾಡಲು ಸಾಧ್ಯವಾಗುವಂತಹ ಸಮಾಜವನ್ನು ನಾವು ಪುನರ್ನಿರ್ಮಿಸಬೇಕಿದೆ. ಆದರೆ, ನಮ್ಮ ಸಹೋದ್ಯೋಗಿ ನೀಡಿದ ಹೇಳಿಕೆಯನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ’ ಎಂದಿದ್ದಾರೆ.
ಪೊಲೀಸರು ನಿಷ್ಪಕ್ಷಪಾತಿಗಳಾಗಿರಲಿ:
ಪೊಲೀಸ್ ಇಲಾಖೆಯನ್ನೂ ರಾಜಕೀಯಗೊಳಿಸಲಾಗುತ್ತಿದೆ ಎಂದು ಬೋಸ್ ಕಳವಳ ವ್ಯಕ್ತ ಪಡಿಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದೇ ಪೊಲೀಸರ ಆದ್ಯ ಕರ್ತವ್ಯ. ಆದರೆ ಬಂಗಾಳದಲ್ಲಿ ಕೆಲವು ಪೊಲೀಸರು ಭ್ರಷ್ಟರಾಗಿದ್ದು, ರಾಜಕೀಯಗೊಂಡಿದ್ದಾರೆ. ಆಡಳಿತ ಪಕ್ಷಗಳ ತಾಳಕ್ಕೆ ತಕ್ಕಂತೆ ಇರದೇ, ಪೊಲೀಸರು ನಿಷ್ಪಕ್ಷಪಾತಿಗಳಾಗಿರಬೇಕು ಎಂದೂ ಬೋಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.