ADVERTISEMENT

ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಹುದ್ದೆ ತ್ಯಜಿಸಲು ಇಂಗಿತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 14:48 IST
Last Updated 23 ಜನವರಿ 2023, 14:48 IST
ಭಗತ್‌ ಸಿಂಗ್‌ ಕೋಶಿಯಾರಿ
ಭಗತ್‌ ಸಿಂಗ್‌ ಕೋಶಿಯಾರಿ   

ಮುಂಬೈ (ಪಿಟಿಐ): ಛತ್ರಪತಿ ಶಿವಾಜಿ ಕುರಿತ ಹೇಳಿಕೆಗೆ ತೀವ್ರ ಟೀಕೆಗೆ ಗುರಿಯಾಗಿರುವ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ಹುದ್ದೆ ತ್ಯಜಿಸುವ ಇಂಗಿತವನ್ನು ಪ್ರಧಾನಿ ಮೋದಿ ಅವರ ಎದುರು ವ್ಯಕ್ತಪಡಿಸಿರುವುದಾಗಿ ಸೋಮವಾರ ಹೇಳಿದ್ದಾರೆ.

‘ಎಲ್ಲ ರೀತಿಯ ರಾಜಕೀಯ ಜವಾಬ್ದಾರಿಗಳಿಂದ ಬಿಡುಗಡೆ ಪಡೆಯಬೇಕು ಮತ್ತು ಬದುಕಿನ ಮುಂದಿನ ಅವಧಿಯನ್ನು ಓದು, ಬರಹ ಮತ್ತು ಇನ್ನಿತರ ಚಟುವಟಿಕೆಯಲ್ಲಿ ಕಳೆಯಲು ತೀರ್ಮಾನಿಸಿದ್ದೇನೆ. ಈ ಇಂಗಿತವನ್ನು ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರ ಬಳಿಯೂ ವ್ಯಕ್ತಪಡಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಮೋದಿ ಅವರಿಂದ ನಾನು ಸದಾ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ. ಈ ವಿಚಾರದಲ್ಲೂ ಅವರಿಂದ ಅದನ್ನೇ ನಿರೀಕ್ಷಿಸುತ್ತಿದ್ದೇನೆ’ ಎಂದಿದ್ದಾರೆ.

ADVERTISEMENT

‘ಸಂತರು, ಸಾಮಾಜ ಸುಧಾರಕರು ಮತ್ತು ಧೀರ ಹೋರಾಟಗಾರರ ಭೂಮಿ ಮಹಾರಾಷ್ಟ್ರದಂತಹ ಭವ್ಯ ರಾಜ್ಯದಲ್ಲಿ ರಾಜ್ಯ ಸೇವಕ ಅಥವಾ ರಾಜ್ಯಪಾಲನಾಗಿ ಸೇವೆ ಸಲ್ಲಿಸಲು ಸಿಕ್ಕಿರುವ ಅವಕಾಶವನ್ನು ಗೌರವ ಮತ್ತು ಸುಯೋಗವೆಂದು ಭಾವಿಸಿರುವೆ’ ಎಂದು ಕೋಶಿಯಾರಿ ಹೇಳಿದ್ದಾರೆ.

ಇತ್ತೀಚೆಗೆ ಛತ್ರಪತಿ ಶಿವಾಜಿ ಅವರಿಗೆ ಅಗೌರವ ಉಂಟು ಮಾಡುವಂತೆ ಕೋಶಿಯಾರಿ ಅವರು ‘ಶಿವಾಜಿ ಹಳೆ ಕಾಲದ ಐಕಾನ್‌’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಮಹಾರಾಷ್ಟ್ರದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಈ ಹಿಂದಿನ ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಸರ್ಕಾರದ ಅವಧಿಯಲ್ಲೂ ಹಲವು ವಿವಾದಗಳಿಗೆ ಕೋಶಿಯಾರಿ ಗ್ರಾಸವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.