ADVERTISEMENT

ವಾರ್ಷಿಕ ₹90 ಸಾವಿರದ ಭರವಸೆ ಕೊಟ್ಟ ಭುಟಿಯಾ

‘ನ್ಯಾಯ್‌’ ಪ್ರಸ್ತಾವದ ಮಾದರಿಯಲ್ಲೇ ಮತ್ತೊಂದು ಯೋಜನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 18:28 IST
Last Updated 28 ಮಾರ್ಚ್ 2019, 18:28 IST
   

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಹಮ್ರೊ ಸಿಕ್ಕಿಂ ಪಕ್ಷದ (ಎಚ್‌ಎಸ್‌ಪಿ) ಅಧ್ಯಕ್ಷ ಬೈಚುಂಗ್‌ ಭುಟಿಯಾ ಸಿಕ್ಕಿಂ ಪ್ರಜೆಗಳಿಗೆ ವಾರ್ಷಿಕ ₹ 90,000 ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.

ದೇಶದ ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ ತಲಾ ₹ 72 ಸಾವಿರ ಕನಿಷ್ಠ ಆದಾಯ ಖಾತರಿ ಯೋಜನೆಯ ಪ್ರಸ್ತಾವ
ವನ್ನು (ನ್ಯೂನತಮ್‌ ಆಯ್‌ ಯೋಜನಾ–ನ್ಯಾಯ್‌) ಸೋಮವಾರವಷ್ಟೇ ರಾಹುಲ್‌ ಪ್ರಕಟಿಸಿದ್ದರು. ಇದೇ ಮಾದರಿಯ ಸ್ವಲ್ಪ ಭಿನ್ನವಾದ ಪ್ರಸ್ತಾವವನ್ನು ಭುಟಿಯಾ ಘೋಷಣೆ ಮಾಡಿದ್ದಾರೆ. ಇದಕ್ಕೆ ‘ಸಿಕ್ಕಿಮೇ ಸಮಾನ್‌ ಯೋಜನಾ’ ಎಂದು ಹೆಸರಿಟ್ಟಿದ್ದಾರೆ.

ದೇಶದ ಫುಟ್‌ಬಾಲ್‌ ತಂಡದ ನಾಯಕನಾಗಿದ್ದ ಭುಟಿಯಾ, ತೃಣಮೂಲ ಕಾಂಗ್ರೆಸ್‌ ಸೇರಿದ್ದರು. ಅಲ್ಲಿಂದ ಹೊರಬಂದು, ಸಿಕ್ಕಿಂನಲ್ಲಿ ಎಚ್‌ಎಸ್‌ಪಿ ಸ್ಥಾಪಿಸಿ ಚುನಾವಣಾ ಅಖಾಡಕ್ಕಿಳಿದಿದ್ದಾರೆ.ಲೋಕಸಭಾ ಚುನಾವಣೆ ಜತೆಗೆ ಸಿಕ್ಕಿಂನಲ್ಲಿಏಪ್ರಿಲ್‌ 11ರಂದು ವಿಧಾನಸಭಾ ಚುನಾವಣೆಯೂ ನಡೆಯಲಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 25 ದಿನಗಳಲ್ಲಿ ‘ಸಮಾನ ಸಿಕ್ಕಿಂ ಯೋಜನೆ’ ಜಾರಿಗೊಳಿಸುವುದಾಗಿ ಎಚ್‌ಎಸ್‌ಪಿ ಹೇಳಿದೆ.

ADVERTISEMENT

‘ಇದು ಮತದಾರರನ್ನು ಸೆಳೆಯುವುದಕ್ಕಾಗಿ ನೀಡಿರುವ ಭರವಸೆ ಅಲ್ಲ. ಇದನ್ನು ಕೊಡುಗೆ ಅಥವಾ ಬಕ್ಷೀಸು ಎಂದು ಕರೆಯುವುದು ಸರಿಯಲ್ಲ. ಇದು ಸಿಕ್ಕಿಂನವರ ಸಂಪತ್ತಿನ ಪುನರ್‌ ವಿತರಣೆ. ಸಿಕ್ಕಿಂ ಜನರ ಕ್ಷೇಮಾಭಿವೃದ್ಧಿ ಉದ್ದೇಶವನ್ನು ಹೊಂದಿದೆ’ ಎಂದು ಪಕ್ಷ ಪ್ರತಿಪಾದಿಸಿದೆ. ‘ಪವನ್‌ ಚಾಮ್ಲಿಂಗ್‌ ನೇತೃತ್ವದ ಎಸ್‌ಡಿಎಫ್‌ ಸರ್ಕಾರ 25 ವರ್ಷಗಳಲ್ಲಿ ಮಾಡದಂತಹ ಈ ಕಾರ್ಯವನ್ನು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 25 ದಿನಗಳಲ್ಲಿ ಮಾಡಿ ತೋರಿಸಲಿದೆ’ ಎಂದು ಭುಟಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.