ADVERTISEMENT

ರೈತರ ಪ್ರತಿಭಟನೆಗೆ ಅಣ್ಣಾ ಹಜಾರೆ ಬೆಂಬಲ

ರಾಳೆಗಾಂವ್ ಸಿದ್ದಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ

ಪಿಟಿಐ
Published 8 ಡಿಸೆಂಬರ್ 2020, 5:36 IST
Last Updated 8 ಡಿಸೆಂಬರ್ 2020, 5:36 IST
ಅಣ್ಣಾ ಹಜಾರೆ
ಅಣ್ಣಾ ಹಜಾರೆ   

ಪುಣೆ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮಂಗಳವಾರ ದಿನವಿಡೀ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಕೇಂದ್ರದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ರಾಷ್ಟ್ರವ್ಯಾಪಿ ಹೋರಾಟ ಹಾಗೂ ‘ಭಾರತ್‌ ಬಂದ್‌‘ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.‌

ಮಹಾರಾಷ್ಟ್ರದ ಅಹಮದ್‌ನಗರ್ ಜಿಲ್ಲೆಯ ರಾಳೆಗಾಂವ್ ಸಿದ್ದಿ ಗ್ರಾಮದಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ, ‘ಕೃಷಿಕರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ, ಈ ಆಂದೋಲನ ದೇಶವ್ಯಾಪಿ ನಡೆಯಬೇಕು‘ ಎಂದು ಹೇಳಿದರು.

‘ಸರ್ಕಾರರಗಳು ಭರವಸೆಗಳನ್ನು ಮಾತ್ರ ನೀಡಿದವು. ಆದರೆ ರೈತರ ಬೇಡಿಕೆಗಳನ್ನು ಎಂದಿಗೂ ಈಡೇರಿಸಲಿಲ್ಲ‘ ಎಂದು ಆರೋಪಿಸಿದ ಹಜಾರೆಯವರು, ‘ದೆಹಲಿಯಲ್ಲಿ ನಡೆಯುತ್ತಿರುವ ಈ ಆಂದೋಲನವು ದೇಶಾದ್ಯಂತ ವಿಸ್ತರಿಸಬೇಕೆಂದು ದೇಶದ ಜನರಲ್ಲಿ ನಾನು ಮನವಿ ಮಾಡುತ್ತಿದ್ದೇನೆ‘ ಎಂದರು.

ADVERTISEMENT

‘ರೈತರ ಹಿತಾಸಕ್ತಿಗಾಗಿ ಕೆಲಸ ಮಾಡಲು ಸರ್ಕಾರದ ಮೇಲೆ ಒತ್ತಡ ತರುವಂತಹ ವಾತಾವರಣವನ್ನು ಈ ಆಂದೋಲನ ಸೃಷ್ಟಿಸಬೇಕು. ಆದರೆ, ಯಾರೂ ಹಿಂಸಾಚಾರಕ್ಕೆ ಮುಂದಾಗಬಾರದು‘ ಎಂದು ಅವರು ಮನವಿ ಮಾಡಿದರು.

‘ರೈತರು ಹೋರಾಟದ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಇದು ಸರಿಯಾದ ಸಮಯ‘ ಎಂದ ಅವರು ‘ನಾನು ಹಿಂದೆಯೂ ರೈತರ ಹೋರಾಟವನ್ನು ಬೆಂಬಲಿಸುತ್ತಿದ್ದೆ. ಅದನ್ನು ಈಗಲೂ ಮುಂದುವರಿಸುತ್ತೇನೆ‘ ಎಂದು ಹೇಳಿದರು.

‘ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗಕ್ಕೆ (ಸಿಎಸಿಪಿ) ಸ್ವಾಯತ್ತತೆ ನೀಡುವ ಜತೆಗೆ, ಕೃಷಿ ತಜ್ಞ ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು. ಒಂದೊಮ್ಮೆ ಇದು ಜಾರಿಗೆ ತರಲು ವಿಫಲವಾದರೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ‘ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.