ADVERTISEMENT

ಕಂಗನಾ ಹೇಳಿಕೆಗೆ ಶಿವಸೇನೆ ಕಿಡಿ; ಎಲ್ಲ ರಾಷ್ಟ್ರೀಯ ಪ್ರಶಸ್ತಿ ಹಿಂಪಡೆಯಲು ಆಗ್ರಹ

ಪಿಟಿಐ
Published 13 ನವೆಂಬರ್ 2021, 9:24 IST
Last Updated 13 ನವೆಂಬರ್ 2021, 9:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘1947ರಲ್ಲಿ ದೊರೆತಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ’ ಎಂದು ಹೇಳಿಕೆ ನೀಡಿರುವ ನಟಿ ಕಂಗನಾ ರನೌತ್ ಅವರಿಗೆ ನೀಡಲಾಗಿರುವ ಎಲ್ಲ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂಪಡೆಯಬೇಕು ಎಂದು ಶಿವಸೇನೆ ಶನಿವಾರ ಒತ್ತಾಯಿಸಿದೆ. ‘ನಟಿಯ ಈ ಹೇಳಿಕೆ ವಿಶ್ವಾಶ ಘಾತುಕವಾದುದು’ ಎಂದೂ ಆರೋಪಿಸಿದೆ.

ಅಸಂಖ್ಯಾತ ಭಾರತೀಯರ ರಕ್ತ, ಬೆವರು, ಕಣ್ಣೀರು, ತ್ಯಾಗಬಲಿದಾನದ ಮೂಲಕ ನಮಗೆ ದೊರೆತಿರುವ ಸ್ವಾತಂತ್ರ್ಯದ ಅವಹೇಳನವನ್ನೂ ದೇಶದ ಜನತೆ ಎಂದಿಗೂ ಸಹಿಸುವುದಿಲ್ಲ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ.

‘ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಕಂಗನಾ ಅವರಿಗೆ ನೀಡಲಾಗಿರುವ ಎಲ್ಲ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂಪಡೆಯಬೇಕು. ಈ ಹೇಳಿಕೆಯು ಅವರ ನಕಲಿ ರಾಷ್ಟ್ರೀಯತೆಯನ್ನು ಬಹಿರಂಗಪಡಿಸಿವೆ’ ಎಂದು ಸೇನೆ ಟೀಕಿಸಿದೆ.

ADVERTISEMENT

‘ಕಂಗನಾ ಅವರಂತೆ ಯಾರೂ ಸ್ವಾತಂತ್ರ್ಯ ಹೋರಾಟಗಾರರನ್ನು ಹೀಗೆ ಅವಮಾನಿಸಿರಲಿಲ್ಲ. ಪದ್ಮಶ್ರೀ ಪ್ರಶಸ್ತಿಯನ್ನು ಹಿಂದೆ ಸ್ವಾತಂತ್ರ್ಯ ಹೋರಾಟಗಾರರಿಗೂ ನೀಡಲಾಗಿದೆ. ನಟಿಗೂ ಈಗ ಅದೇಪದ್ಮಶ್ರೀ ನೀಡಿರುವುದು ದುರದೃಷ್ಟಕರ’ ಎಂದು ಸಂಪಾದಕೀಯದಲ್ಲಿ ಹೇಳಿದೆ.

‘ನಟಿಯ ಈ ಹೇಳಿಕೆಯನ್ನು ಕೇಳಿ ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್‌ ಪಟೇಲರ ಏಕತಾ ಮೂರ್ತಿಯು ಅಳುತ್ತಿರಬೇಕು’ ಎಂದು ವ್ಯಂಗ್ಯವಾಡಿದೆ. ನಟಿಯ ಹೇಳಿಕೆಯನ್ನು ಬಿಜೆಪಿಯ ವರುಣ್‌ ಗಾಂಧಿ, ಅನುಪಮ್‌ ಖೇರ್‌ ಟೀಕಿಸಿದ್ದಾರೆ. ಉಳಿದ ಬಿಜೆಪಿ ರಾಷ್ಟ್ರವಾದಿಗಳು ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.