ಸಮಷ್ಟಿಪುರ್, ಬಿಹಾರ: ಮಗನ ಶವ ನೀಡಬೇಕಾದರೆ ₹50 ಸಾವಿರ ಲಂಚ ಕೊಡಬೇಕೆಂಬ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬೇಡಿಕೆಯನ್ನು ಪೂರೈಸಲು ಬಿಹಾರದ ವೃದ್ಧ ದಂಪತಿ ಹಣಕ್ಕಾಗಿ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ಕುರಿತು ವರದಿಯಾಗಿದೆ.
ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮಗನ ಶವ ನೀಡಲು ದಂಪತಿ ಬಳಿ ₹50 ಸಾವಿರ ಕೇಳಿದ್ದಾರೆ ಎನ್ನಲಾಗಿದೆ. ದಂಪತಿ ಮನೆ ಮನೆಗಳಿಗೆ ತೆರಳಿ ಭಿಕ್ಷೆ ಬೇಡುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
‘ಕೆಲವು ಸಮಯದ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದ. ಈಗ, ನನ್ನ ಮಗನ ಶವ ಸಮಷ್ಟಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿತು. ಶವವನ್ನು ನೀಡಲು ಆಸ್ಪತ್ರೆಯವರು ₹50 ಸಾವಿರ ಕೇಳಿದ್ದಾರೆ. ನಾವು ಬಡವರು, ಅಷ್ಟು ಹಣ ಕೊಡಲು ಹೇಗೆ ಸಾಧ್ಯ?‘ ಎಂದು ಮಹೇಶ್ ಠಾಕೂರ್ ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡುತ್ತಾ ನೋವು ತೋಡಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿನ ಬಹುತೇಕ ಆರೋಗ್ಯ ಕಾರ್ಯಕರ್ತರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಸಂಬಳ ಸಿಕ್ಕಿಲ್ಲ. ರೋಗಿಗಳ ಸಂಬಂಧಿಕರಿಂದ ಸಿಬ್ಬಂದಿ ಹಣ ಪಡೆದಿರುವ ಹಲವಾರು ನಿದರ್ಶನಗಳಿವೆ ಎಂದು ಮಾಧ್ಯಮ ಸಂಸ್ಥೆ ಎನ್ಡಿಟಿವಿ ವರದಿ ಮಾಡಿದೆ.
ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
‘ಶವ ಹಸ್ತಾಂತರಿಸಲು ಹಣ ಕೇಳಿದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಇದು ಮಾನವೀಯತೆಗೆ ಮಾಡಿದ ಅವಮಾನ’ ಎಂದು ಸಮಷ್ಟಿಪುರದ ಸರ್ಕಾರಿ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಎಸ್.ಕೆ.ಚೌಧರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.