
ಪಟ್ನಾ: ಅಪಕ್ವತೆ ಮತ್ತು ಹತಾಶೆಯಿಂದ ಕೂಡಿದ ರಾಜಕೀಯವು ಬಿಹಾರಕ್ಕೆ ಮಾರಕವಾಗಲಿದೆ ಎಂದು ಜೆಡಿ(ಯು) ಹಿರಿಯ ನಾಯಕ ಅಶೋಕ್ ಚೌಧರಿ ಅವರು ಶುಕ್ರವಾರ ಹೇಳಿದ್ದಾರೆ.
ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಶೋಕ್ ಚೌಧರಿ ಅವರು ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಸುಲಭವಾಗಿ ಬಹುಮತ ಪಡೆಯಲಿದೆ. ವಿಜಯದಲ್ಲೂ ನಾವು ವಿನಮ್ರರಾಗಿರುತ್ತೇವೆ. ಆದರೆ ಕೆಲವು ರಾಜಕೀಯ ಪಕ್ಷಗಳ ನಾಯಕರು ಅಪಕ್ವತೆಯಿಂದ ಮಾತನಾಡುತ್ತಿದ್ದಾರೆ. ಅವರು ದೂರದೃಷ್ಠಿ ಹಾಗೂ ಸೈದ್ಧಾಂತಿಕ ನಿಲುವನ್ನು ಹೊಂದಿರದೇ ಯೋಜನೆಗಳ ಕುರಿತು ಹೇಳಿಕೆ ನೀಡುತ್ತಾರೆ, ಅದರ ಕುರಿತು ಕಳವಳವಿದೆ ಎಂದಿದ್ದಾರೆ.
ಕೆಲವು ನಾಯಕರು ಅವರಿಗೆ ಬೇಕಾದಂತೆ ರಾಜಕೀಯ ಮಾಡುವ ಮೂಲಕ ರಾಜಕೀಯ ಅಪಕ್ವತೆಯನ್ನು ತೋರಿಸುತ್ತಿದ್ದಾರೆ. ಅಧಿಕಾರಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮತ ಎಣಿಕೆ ನಡೆಯುತ್ತಿದ್ದು, ಬೆಳಿಗ್ಗೆ 10 ಗಂಟೆಯ ವೇಳೆಗೆ ಎನ್ಡಿಎ ಮೈತ್ರಿಕೂಟವು 163 ಸ್ಥಾನಗಳ ಮುನ್ನಡೆಯಲ್ಲಿದೆ.