ಪಟ್ನಾ: ‘ದೇಶವು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮಿಂದೆದ್ದರೆ, ಬಿಹಾರಿಗರು ಮಾತ್ರ ತಮ್ಮ ಮತ ರಕ್ಷಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ’ ಎಂದು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಕಟಕಿಯಾಡಿದ್ದಾರೆ.
ರಾಹುಲ್ ಗಾಂಧಿ ಸಾರಥ್ಯದಲ್ಲಿ ಆ. 17ರಂದು ಆರಂಭಗೊಳ್ಳಲಿರುವ ‘ಮತದಾತ ಅಧಿಕಾರ (ಮತದಾರರ ಹಕ್ಕು) ಯಾತ್ರೆ’ಯಲ್ಲಿ ಭಾಗಿಯಾಗುವಂತೆ ಬಿಹಾರಿಗರಿಗೆ ಮನವಿ ಮಾಡುವ ಬಹಿರಂಗ ಪತ್ರವನ್ನು ಬಿಡುಗಡೆ ಮಾಡಿ, ಅವರು ಮಾತನಾಡಿದರು.
‘ನಾವು ನಮ್ಮ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳದಿದ್ದರೆ ಬಿಜೆಪಿ ಪ್ರಾಯೋಜಿತ ಸಂಚುಕೋರರು ಬಡವರ ಮತದಾನದ ಹಕ್ಕನ್ನು ಕಸಿದುಕೊಂಡು ಬಿಹಾರದಲ್ಲಿ ದಬ್ಬಾಳಿಕೆಯ, ಊಳಿಗಮಾನ್ಯ ಆಡಳಿತವನ್ನು ಪುನಃ ಸ್ಥಾಪಿಸುತ್ತಾರೆ’ ಎಂದು ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿನ (ಎಸ್ಐಆರ್) ಲೋಪದೋಷಗಳನ್ನು ಉಲ್ಲೇಖಿಸಿದ ಅವರು, ‘ಸತ್ತವರ ಬದಲಿಗೆ ಜೀವಂತವಾಗಿರುವವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ದೂರಿದರು.
‘ಬಡವರು ತಮ್ಮ ಒಂದು ಮತದ ಹಕ್ಕಿಗಾಗಿ ಹೋರಾಡಬೇಕಾಗಿದ್ದರೆ, ಆಡಳಿತಾರೂಢರ ಬೆಂಬಲಿಗರು ಎರಡು ಮತಗಳನ್ನು ಚಲಾಯಿಸುವ ಹಕ್ಕನ್ನು ಹೊಂದಲು ಅವಕಾಶ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.