ADVERTISEMENT

ಮಂಜು ವರ್ಮಾ ಶರಣಾಗತಿ: 14 ದಿನ ನ್ಯಾಯಾಂಗ ಬಂಧನ

ಪಿಟಿಐ
Published 20 ನವೆಂಬರ್ 2018, 10:59 IST
Last Updated 20 ನವೆಂಬರ್ 2018, 10:59 IST
ಮುಸುಕು ಹೊದ್ದು ಬಂದ ಮಂಜು ವರ್ಮಾ ಅವರು ಬಿಹಾರದ ಬೆಗುಸರಾಯ್ ನ್ಯಾಯಾಲಯಕ್ಕೆ ಮಂಗಳವಾರ ಶರಣಾದರು –ಪಿಟಿಐ ಚಿತ್ರ 
ಮುಸುಕು ಹೊದ್ದು ಬಂದ ಮಂಜು ವರ್ಮಾ ಅವರು ಬಿಹಾರದ ಬೆಗುಸರಾಯ್ ನ್ಯಾಯಾಲಯಕ್ಕೆ ಮಂಗಳವಾರ ಶರಣಾದರು –ಪಿಟಿಐ ಚಿತ್ರ    

ಬೆಗುಸರಾಯ್, ಬಿಹಾರ: ಬಿಹಾರದ ಮಾಜಿ ಸಚಿವೆ ಮಂಜು ವರ್ಮಾ ಅವರು ಮಂಗಳವಾರ ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದು, ಅವರನ್ನು ಡಿಸೆಂಬರ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

ಶಸ್ತ್ರಾಸ್ತ್ರ ಪ್ರಕರಣ ಹಾಗೂ ಮುಜಫ್ಫರ್‌ಪುರ ವಸತಿಗೃಹ ಹಗರಣದ ಆರೋಪಿಯಾಗಿರುವ ಅವರು ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಹಲವು ಬಾರಿ ಪ್ರಜ್ಞೆ ತಪ್ಪಿದ್ದರು. ವೈದ್ಯಕೀಯ ತಂಡ ಅವರನ್ನು ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಧೀಶರಾದ ಪ್ರಭಾತ್ ತ್ರಿವೇದಿ ಅವರು ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.

ಆರೋಪಿಗಳಾದ ಮಂಜು ಹಾಗೂ ಅವರ ಪತಿ ಚಂದ್ರಶೇಖರ ವರ್ಮಾ ವಿರುದ್ಧ ಕಳೆದ ಆಗಸ್ಟ್‌ನಲ್ಲಿ ಚೆರಿಯಾ ಬರಿಯಾರ್‌ಪುರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮುಜಫ್ಫರ್‌ಪುರ ವಸತಿನಿಲಯ ಹಗರಣ ಸಂಬಂಧ ವರ್ಮಾ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು.

ADVERTISEMENT

ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ಜೊತೆಗಿನ ನಂಟಿನ ಆರೋಪದ ಮೇಲೆ ಮಂಜು ವರ್ಮಾ ಅವರು ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚಂದ್ರಶೇಖರ್ ಅಕ್ಟೋಬರ್ 29ರಂದು ಶರಣಾಗಿದ್ದರು.

ನಾಪತ್ತೆಯಾಗಿದ್ದ ಮಂಜುವರ್ಮಾ ಬಂಧಿಸುವಂತೆ ಸುಪ್ರೀಂಕೋರ್ಟ್ ನವೆಂಬರ್ 12ರಂದು ಬಿಹಾರ ಡಿಜಿಪಿ ಅವರಿಗೆ ತಾಕೀತು ಮಾಡಿತ್ತು. ಕೋರ್ಟ್ ನಿರ್ದೇಶನ ಪಡೆದು, ಮಾಜಿ ಸಚಿವರಿಗೆ ಸೇರಿದ ಮನೆ, ಆಸ್ತಿಯನ್ನು ಪೊಲೀಸರು ಜಪ್ತಿ ಮಾಡಿದ್ದರು. ವರ್ಮಾ ಅವರನ್ನು ಆಡಳಿತಾರೂಢ ಜೆಡಿಯು ರಕ್ಷಿಸುತ್ತಿದೆ ಎಂದು ಆರ್‌ಜೆಡಿ ಆರೋಪಿಸಿತ್ತು. ಆದರೆ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದುಜೆಡಿಯು ತಿರುಗೇಟು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.