ಪವನ್ ಖೇರಾ
ಪಟ್ನಾ: ಬಿಹಾರದ ಆರ್ಥಿಕ ಸ್ಥಿತಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವುದು ಕಳವಳಕಾರಿಯಾಗಿದ್ದು, ರಾಜ್ಯದಲ್ಲಿ ಸರ್ಕಾರ ಬದಲಾವಣೆಯ ಅಗತ್ಯವಿದೆ ಎಂದು ಕಾಂಗ್ರೆಸ್ ಹೇಳಿದೆ.
ಪಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ‘ಬಿಹಾರದ ಆರ್ಥಿಕ ಸ್ಥಿತಿ ಮತ್ತು ಸಿಎಂ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವುದು ಗಂಭೀರ ಕಳವಳಕಾರಿ ವಿಷಯ. ನಾವು ಅವರಿಗೆ ಶುಭ ಹಾರೈಸುತ್ತೇವೆ. ಆದರೆ, ಅನಾರೋಗ್ಯ ಪೀಡಿತ ಸಿಎಂ ನೇತೃತ್ವದಲ್ಲಿ ಬಿಹಾರ ಎಷ್ಟು ಸುರಕ್ಷಿತವಾಗಿದೆ? ಎಂಬ ಪ್ರಶ್ನೆ ಹುಟ್ಟುತ್ತದೆ’ ಎಂದು ಹೇಳಿದ್ದಾರೆ.
‘ಬಿಹಾರದಲ್ಲಿ ಅಭಿವೃದ್ಧಿ ಮತ್ತು ಆಡಳಿತ ಸ್ಥಗಿತಗೊಂಡಿದೆ. ರಾಜ್ಯವು ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ’ ಎಂದು ಖೇರಾ ಹೇಳಿದ್ದಾರೆ.
‘ಬಿಹಾರ ‘ಸತ್ಯಾಗ್ರಹ’ ಮತ್ತು ಕ್ರಾಂತಿಗಳ ಜನ್ಮಸ್ಥಳ. ಆದರೆ, ಇಂದು ಬಿಹಾರದ ಜನರು ವಲಸೆ ಹೋಗುವಂತಹ ಪರಿಸ್ಥಿತಿ ಬಂದಿದೆ. ಇಲ್ಲಿನ ಯುವಕರಲ್ಲಿ ಪ್ರತಿಭೆ ಇದ್ದರು, ಅವಕಾಶಗಳು ಸಿಗುತ್ತಿಲ್ಲ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ. ಅಲ್ಲದೆ, ಬಿಹಾರದ ಅರ್ಧಕ್ಕಿಂತ ಹೆಚ್ಚು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಮತ್ತು ವೈದ್ಯರ ಕೊರತೆಯಿದೆ. ಬಿಹಾರದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ಸಿಎಜಿ ವರದಿ ಈಗಾಗಲೇ ತಿಳಿಸಿದೆ’ ಎಂದು ಖೇರಾ ತಿಳಿಸಿದ್ದಾರೆ.
ಸದ್ಯ ಬಿಹಾರದ ಜನರು ಕಾಂಗ್ರೆಸ್ ಕಡೆಗೆ ಒಲವು ಹೊಂದಿದ್ದಾರೆ. ಬಿಹಾರವನ್ನು ಬದಲಾಯಿಸಬೇಕಾಗಿದೆ. ಅದಕ್ಕಾಗಿ ಪ್ರಸ್ತುತ ಇರುವ ಸರ್ಕಾರವನ್ನು ತೆಗೆದುಹಾಕಬೇಕಾಗಿದೆ. ಆದ್ದರಿಂದ ನಾವು ಇಂದು ‘ಸರ್ಕಾರ ಬದಲಾಯಿಸಿ, ಬಿಹಾರ ಬದಲಾಯಿಸಿ’ ಎಂಬ ಹೊಸ ಘೋಷಣೆಯನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.