ADVERTISEMENT

ಮುಜಫ್ಫರಪುರ: ಶ್ರೀಕೃಷ್ಣ ಆಸ್ಪತ್ರೆ ಬಳಿ ಅಸ್ಥಿಪಂಜರ ಭಾಗಗಳು ಪತ್ತೆ

ಪಿಟಿಐ
Published 22 ಜೂನ್ 2019, 19:45 IST
Last Updated 22 ಜೂನ್ 2019, 19:45 IST
ಮುಜಫ್ಫರಪುರದ ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಸಿಕ್ಕ ತಲೆಬುರುಡೆಗಳನ್ನು ವ್ಯಕ್ತಿಯೊಬ್ಬರು ಪ್ರದರ್ಶಿಸಿದರು –ಪಿಟಿಐ ಚಿತ್ರ
ಮುಜಫ್ಫರಪುರದ ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಸಿಕ್ಕ ತಲೆಬುರುಡೆಗಳನ್ನು ವ್ಯಕ್ತಿಯೊಬ್ಬರು ಪ್ರದರ್ಶಿಸಿದರು –ಪಿಟಿಐ ಚಿತ್ರ   

ಮುಜಫ್ಫರಪುರ,ಬಿಹಾರ: ಇಲ್ಲಿನ ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯ (ಎಸ್‌ಕೆಎಂಸಿಎಚ್‌) ಮರಣೋತ್ತರ ಪರೀಕ್ಷೆ ವಿಭಾಗದ ಬಳಿಯ ಗಟಾರಿನಲ್ಲಿ ಮಾನವನ ಅಸ್ಥಿಪಂಜರದ ಭಾಗಗಳು ಶನಿವಾರ ಪತ್ತೆಯಾಗಿದ್ದು, ಸಂಶಯಕ್ಕೆ ಕಾರಣವಾಗಿದೆ.

ಮಿದುಳಿನ ತೀವ್ರ ಉರಿಯೂತದಿಂದ (ಎಇಎಸ್‌) ಬಳಲುತ್ತಿದ್ದ ನೂರಾರು ಮಕ್ಕಳನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ, 100ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ ನಂತರ ಈ ಆಸ್ಪತ್ರೆ ಸುದ್ದಿಯಲ್ಲಿದೆ.

‘ವಾರಸುದಾರರು ಇಲ್ಲದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ಹೂಳಲಾಗುತ್ತದೆ. ಅಸ್ಥಿಪಂಜರದ ಭಾಗಗಳು ಸಹ ಶವಗಳನ್ನು ಹೂಳುವ ಸ್ಥಳದಲ್ಲಿಯೇ ದೊರೆತಿವೆ. ಮರಣೋತ್ತರ ಪರೀಕ್ಷೆ ವಿಭಾಗವು ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲರ ನಿಯಂತ್ರಣದಲ್ಲಿದೆ. ಹೀಗಾಗಿ ಸಮಿತಿಯೊಂದನ್ನು ರಚಿಸಿ, ತನಿಖೆ ನಡೆಸುವಂತೆ ಪ್ರಾಂಶುಪಾಲರಿಗೆ ತಿಳಿಸಿದ್ದೇನೆ’ ಎಂದು ಆಸ್ಪತ್ರೆಯ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ.ಸುನೀಲ್‌ಕುಮಾರ್‌ ಶಾಹಿ ಹೇಳಿದ್ದಾರೆ.

ADVERTISEMENT

ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಕುಂದನ್‌ಕುಮಾರ್, ನಗರ ಎಸ್ಪಿ ನೀರಜ್‌ಕುಮಾರ್‌ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಮಾನವ ಅಸ್ಥಿಪಂಜರದ ಭಾಗಗಳು ಸಿಕ್ಕಿರುವ ಕುರಿತಂತೆ ತನಿಖೆಯಾಗದ ಹೊರತು ಈಗಲೇ ಬಗ್ಗೆ ಏನನ್ನೂ ಹೇಳಲಾಗದು’ ಎಂದು ಎಸ್ಪಿ ನೀರಜ್‌ಕುಮಾರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಅಸಮಾಧಾನ: ಆಸ್ಪತ್ರೆಯ ಆವರಣದಲ್ಲಿ ಶವಗಳನ್ನು ಸರಿಯಾಗಿ ಹೂಳುವುದಿಲ್ಲ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಈ ಜಾಗದಲ್ಲಿ ಬೀಡಾಡಿ ನಾಯಿಗಳು ಜಮಾಯಿಸುವುದು ಸಾಮಾನ್ಯ. ಅರ್ಧ ಸುಟ್ಟ ಶವಗಳನ್ನು ತಿನ್ನಲು ನಾಯಿಗಳು ಬರುತ್ತವೆ. ಈ ಎಲ್ಲ ಅವ್ಯವಸ್ಥೆಯಿಂದ ಇಲ್ಲಿ ಬದುಕುವುದೇ ಅಸಹನೀಯವಾಗಿದೆ ಎಂದೂ ಜನರು ಅಲವತ್ತುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.