
ಇಂಫಾಲ್: ‘ಮಣಿಪುರದ ವಿದ್ಯಮಾನಗಳ ಬಗ್ಗೆ ಚರ್ಚಿಸಲಿಕ್ಕಾಗಿ ಭಾನುವಾರ ದೆಹಲಿಗೆ ಬರುವಂತೆ ಪಕ್ಷದ ವರಿಷ್ಠರು ಶಾಸಕರನ್ನು ಆಹ್ವಾನಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಎನ್. ಬಿರೇನ್ ಸಿಂಗ್ ಶುಕ್ರವಾರ ಹೇಳಿದರು.
‘ವರಿಷ್ಠರು ನೀಡಿರುವ ಆಹ್ವಾನವು ಸರ್ಕಾರ ರಚನೆಗೆ ಸಂಬಂಧಿಸಿರಬಹುದು ಎಂಬುದು ನನ್ನ ಅನಿಸಿಕೆ. ನಮ್ಮಲ್ಲಿ ಅನೇಕರು ದೆಹಲಿಗೆ ಹೋಗುತ್ತಿದ್ದಾರೆ. ಶೀಘ್ರದಲ್ಲೇ ಜನಪರ ಸರ್ಕಾರ ರಚನೆಯಾಗಬಹುದು’ ಎಂಬ ವಿಶ್ವಾಸವನ್ನು ಸುದ್ದಿಗಾರರ ಬಳಿ ವ್ಯಕ್ತಪಡಿಸಿದರು.
ಮೈತೇಯಿ, ಕುಕಿ–ಜೊ ಸಮುದಾಯಗಳ ನಡುವೆ 2023ರ ಮೇ ತಿಂಗಳಿನಿಂದಲೂ ಜನಾಂಗೀಯ ಸಂಘರ್ಷ ನಡೆದಿದ್ದು, ಇದುವರೆಗೂ 260 ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಎನ್. ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರವು ಫೆ. 13ರಿಂದ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದೆ. 2027ರವರೆಗೂ ಅಧಿಕಾರಾವಧಿ ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತುಗೊಳಿಸಿದೆ.
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿಯ 37 ಶಾಸಕರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.