ADVERTISEMENT

ಪೌರತ್ವ ಕಾಯ್ದೆಯಲ್ಲಿ ಮುಸ್ಲಿಮರನ್ನೂ ಯಾಕೆ ಸೇರಿಸಬಾರದು: ಬಿಜೆಪಿ ನಾಯಕ ಪ್ರಶ್ನೆ

ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್

ಏಜೆನ್ಸೀಸ್
Published 24 ಡಿಸೆಂಬರ್ 2019, 5:42 IST
Last Updated 24 ಡಿಸೆಂಬರ್ 2019, 5:42 IST
ಚಂದ್ರ ಕುಮಾರ್ ಬೋಸ್ (ಎಎನ್‌ಐ ಚಿತ್ರ)
ಚಂದ್ರ ಕುಮಾರ್ ಬೋಸ್ (ಎಎನ್‌ಐ ಚಿತ್ರ)   

ಕೋಲ್ಕತ್ತ:ಪೌರತ್ವ (ತಿದ್ದುಪಡಿ) ಕಾಯ್ದೆಯಲ್ಲಿ ಮುಸ್ಲಿಮರನ್ನೂ ಯಾಕೆ ಸೇರಿಸಬಾರದು ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಉಪಾಧ್ಯಕ್ಷಚಂದ್ರ ಕುಮಾರ್ ಬೋಸ್ ಪ್ರಶ್ನಿಸಿದ್ದಾರೆ.

ಕಾಯ್ದೆ ಬೆಂಬಲಿಸಿ ಕೋಲ್ಕತ್ತದಲ್ಲಿ ನಡೆದ ರ್‍ಯಾಲಿಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾಗವಹಿಸಿ ಹಿಂತಿರುಗಿದ ಕೆಲವೇ ಗಂಟೆಗಳಲ್ಲಿ ಬೋಸ್ ಈ ಪ್ರಶ್ನೆ ಕೇಳಿದ್ದಾರೆ.

‘2019ರ ಪೌರತ್ವ (ತಿದ್ದುಪಡಿ) ಕಾಯ್ದೆ ಯಾವುದೇ ಧರ್ಮಕ್ಕೆ ಸಂಬಂಧಿಸಿಲ್ಲವೆಂದಾದರೆ; ಹಿಂದು, ಸಿಖ್, ಬೌದ್ಧ, ಕ್ರೈಸ್ತ, ಪಾರ್ಸಿ ಮತ್ತು ಜೈನರಿಗೆ ಮಾತ್ರ ಎಂದು ನಾವು ಯಾಕೆ ಹೇಳುತ್ತಿದ್ದೇವೆ. ಮುಸ್ಲಿಮರನ್ನೂ ಯಾಕೆ ಸೇರಿಸಬಾರದು? ನಾವು ಪಾರದರ್ಶಕವಾಗಿರಬೇಕು’ ಎಂದುಬೋಸ್ ಟ್ವೀಟ್ ಮಾಡಿದ್ದಾರೆ.

‘ಭಾರತವನ್ನು ಬೇರೆ ಯಾವುದೇ ದೇಶಗಳೊಂದಿಗೆ ಹೋಲಿಸಬೇಡಿ ಮತ್ತು ಸಮೀಕರಿಸಿ ನೋಡಬೇಡಿ. ಇದು ಎಲ್ಲ ಧರ್ಮ ಮತ್ತು ಸಮುದಾಯಗಳವರಿಗೆ ಮುಕ್ತವಾಗಿರುವ ರಾಷ್ಟ್ರ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪೌರತ್ವ ಕಾಯ್ದೆಗೆ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕಚಂದ್ರ ಕುಮಾರ್ ಬೋಸ್ ಸಹ ಕಾಯ್ದೆಯಲ್ಲಿರುವ ಅಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇವರುನೇತಾಜಿ ಸುಭಾಷ್‌ಚಂದ್ರ ಬೋಸ್ ಸಂಬಂಧಿಯೂ ಹೌದು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ‘ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಜಾರಿ ಮಾಡುವುದಿಲ್ಲ’ ಎಂದು ಪಕ್ಷದ ನಾಯಕರು ಸೋಮವಾರ ಹೇಳಿದ್ದರು. ಇದಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್‌ ಜಗನ್‌ ಮೋಹನ ರೆಡ್ಡಿ ಅವರೂ ದನಿಗೂಡಿಸಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.