ADVERTISEMENT

ದೇಶದಲ್ಲಿ ನಡೆಯುವ ಗಲಭೆಗಳ ಹಿಂದೆ ಬಿಜೆಪಿಯದ್ದೇ ಕೈವಾಡ: ಕಾಂಗ್ರೆಸ್‌ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಸೆಪ್ಟೆಂಬರ್ 2022, 11:22 IST
Last Updated 14 ಸೆಪ್ಟೆಂಬರ್ 2022, 11:22 IST
ಕೋಲ್ಕತ್ತದಲ್ಲಿ ಬಿಜೆಪಿ ಬೆಂಬಲಿಗರು ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿರುವುದು
ಕೋಲ್ಕತ್ತದಲ್ಲಿ ಬಿಜೆಪಿ ಬೆಂಬಲಿಗರು ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿರುವುದು   

ಕೋಲ್ಕತ್ತ: ಬಿಜೆಪಿ ಕೈಗೊಂಡಿದ್ದ ‘ನಬಾನ್ನ ಚಲೊ ಅಭಿಯಾನ’ (ರಾಜ್ಯ ಸಚಿವಾಲಯಕ್ಕೆ ಕಾಲ್ನಡಿಗೆ ಜಾಥಾ) ಮಂಗಳವಾರ ಹಿಂಸಾಚಾರಕ್ಕೆ ತಿರುಗಿತ್ತು.

ಈ ಘಟನೆಗೆ ಸಂಬಂಧಿಸಿದ ವಿಡಿಯೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್‌, ಹಿಂಸಾಚಾರಗಳ ಹಿಂದೆ ಬಿಜೆಪಿಯದ್ದೇ ಕೈವಾಡವಿರುವುದಕ್ಕೆ ಇದು ತಾಜಾ ಉದಾಹರಣೆ ಎಂದು ಟೀಕಿಸಿದೆ.

‘ಪಶ್ಚಿಮ ಬಂಗಾಳದಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಿಜೆಪಿಗರನ್ನು ಭಯೋತ್ಪಾದಕರೆನ್ನದೆ ಬೇರೇನು ಹೇಳಬೇಕು? ತೇಜಸ್ವಿ ಸೂರ್ಯ ಹಾಗೂ ಪ್ರತಾಪ ಸಿಂಹ ಅವರೇ, ಎಲ್ಲಿ ಅಡಗಿದ್ದೀರಿ? ಬಂಗಾಳಕ್ಕೆ ಬುಲ್ಡೋಸರ್ ಕಳಿಸಿಕೊಡುವುದಿಲ್ಲವೇ’ ಎಂದು ಪ್ರಶ್ನಿಸಿದೆ.

ADVERTISEMENT

ದೇಶದಲ್ಲಿ ನಡೆಯುವ ಗಲಭೆ, ಹಿಂಸಾಚಾರಗಳ ಹಿಂದೆ ಬಿಜೆಪಿಯದ್ದೇ ಕೈವಾಡವಿರುವುದಕ್ಕೆ ಇದು ತಾಜಾ ಉದಾಹರಣೆ ಎಂದೂ ಕಾಂಗ್ರೆಸ್‌ ಆರೋಪಿಸಿದೆ.

'ಸಾರ್ವಜನಿಕ ಆಸ್ತಿ ಹಾನಿ ಮಾಡುವವರು ಭಯೋತ್ಪಾದಕರು' ಬಿಜೆಪಿಯವರೇ ಹೇಳಿದ ಈ ಮಾತು ಈಗ ಬಿಜೆಪಿಯವರಿಗೇ ಅನ್ವಯಿಸುತ್ತದೆಯಲ್ಲವೇ ಎಂದು ಕೇಳಿದೆ.

‘ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು, ಬುಲ್ಡೋಜರ್ ಹತ್ತಿಸಬೇಕು, ಭಯೋತ್ಪಾದನೆ ತಡೆ ಕಾಯ್ದೆಯಲ್ಲಿ ಬಂಧಿಸಬೇಕು ಎಂಬ ಬಿಜೆಪಿ ಕಡೆಯಿಂದ ಕೇಳಿಬರದೇ ನೀರವ ಮೌನ ಆವರಿಸಿರುವುದೇಕೆ’ ಎಂದು ಕೆಪಿಸಿಸಿ ಟ್ವೀಟಿಸಿದೆ.

ಮಂಗಳವಾರ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನಡೆದ ಘರ್ಷಣೆ ತಾರಕಕ್ಕೇರಿ, ಕೋಲ್ಕತ್ತದ ಜನಜೀವನ ಅಸ್ತವ್ಯಸ್ತಗೊಂಡಿತು.

ಪ್ರತಿಭಟನಕಾರರು ನಗರದ ಕೇಂದ್ರ ಭಾಗದಲ್ಲಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿ, ಪೊಲೀಸರತ್ತ ಕಲ್ಲುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿ ಪ್ರತಿಭಟನಕಾರರನ್ನು ಚದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.