ನವದೆಹಲಿ: ಬಿಜೆಪಿ 2014ರ ಚುನಾವಣೆ ಪ್ರಣಾಳಿಕೆಯನ್ನು ಕಾಪಿ ಪೇಸ್ಟ್ ಮಾಡಿ, ಡೆಡ್ಲೈನ್ ಮಾತ್ರ ಬದಲಿಸಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಅಹಮದ್ ಪಟೇಲ್ ಹೇಳಿದ್ದಾರೆ.ಬಿಜೆಪಿ ಪ್ರಣಾಳಿಕೆ ಬದಲು ಕ್ಷಮಾಪಣಾ ಪತ್ರದೊಂದಿಗೆ ಬರಬೇಕಿತ್ತು ಎಂದಿದ್ದಾರೆ ಪಟೇಲ್.
ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಕೂಡಲೇ ಸರಣಿ ಟ್ವೀಟ್ಗಳ ಮೂಲಕ ಪಟೇಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಪ್ರಣಾಳಿಕೆಯ ಮುಖಪುಟದಲ್ಲಿ ಜನರ ಗುಂಪು ಕಾಣಬಹುದು. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಒಬ್ಬ ವ್ಯಕ್ತಿಯ ಮುಖವಿದೆ.ಪ್ರಣಾಳಿಕೆ ಬದಲು ಬಿಜೆಪಿ ಕ್ಷಮಾಪಣೆ ಪತ್ರ ಬಿಡುಗಡೆ ಮಾಡಬೇಕಿತ್ತು. 2014ರ ಚುನಾವಣಾ ಪ್ರಣಾಳಿಕೆಯನ್ನೇ ಕಾಪಿ ಪೇಸ್ಟ್ ಮಾಡಿಈ ಹಿಂದೆ ನೀಡಿದ್ದ ಡೆಡ್ಲೈನ್ 2019 ಎಂಬುದನ್ನು 2022,2032,2047,2097 ಎಂದು ಬದಲಿಸಿದ್ದಾರೆ.ಅದೃಷ್ಟವಶಾತ್, ಮುಂದಿನ ಶತಮಾನದಲ್ಲಿ ಮಾಡುತ್ತೇವೆ ಎಂಬ ಡೆಡ್ಲೈನ್ ನೀಡಿಲ್ಲ ಎಂದು ಪಟೇಲ್ ಹೇಳಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಕೂಡಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದರು.ಆದರೆ ಬಿಜೆಪಿ ನಾಯಕರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಮುಂದಾಗಲಿಲ್ಲ.
ನಾವು ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ ಕೂಡಲೇ ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಟ್ಟೆವು.ಆದರೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೂಡಲೇ ನಾಯಕರು ಮನೆಗೆ ಹೊರಟು ಹೋದರು. ಒಂದೇ ಒಂದು ಪ್ರಶ್ನೆಗೆ ಉತ್ತರಿಸಲು ಅವರು ತಯಾರಾಗಿಲ್ಲ. 5 ವರ್ಷದಲ್ಲಿ ಅವರಿಗೆ ಒಂದೇ ಒಂದು ಉತ್ತರ ಸಿಗಲಿಲ್ಲವೇ? ಅವರ ಈ ಅಹಂಕಾರವೇ ಅವರನ್ನುಮೇ 23ರಂದು ಕೆಳಕ್ಕೆ ತಳ್ಳಲಿದೆ ಎಂದಿದ್ದಾರೆ ಪಟೇಲ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.