ಜಮ್ಮು: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ದೇಶದ್ರೋಹದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ.
14 ತಿಂಗಳ ಗೃಹಬಂಧನದಿಂದ ಬಿಡುಗಡೆಗೊಂಡ ನಂತರ ಇತ್ತೀಚೆಗೆ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ್ದ ಮುಫ್ತಿ, ರಾಜ್ಯದ ಧ್ವಜವನ್ನು ಮರಳಿ ಸ್ಥಾಪಿಸಿದ ಬಳಿಕವೇ ರಾಷ್ಟ್ರಧ್ವಜವನ್ನು ಹಿಡಿಯಲಿದ್ದೇನೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ರಾಜ್ಯದ ಧ್ವಜವನ್ನು ಅಥವಾ 370ನೇ ವಿಧಿಯನ್ನು ಮರಳಿ ಸ್ಥಾಪಿಸುವುದು ವಿಶ್ವದ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂದು ಹೇಳಿದೆ.
‘ಮೆಹಬೂಬಾ ಮುಫ್ತಿ ಅವರು ದೇಶದ್ರೋಹಿ ಹೇಳಿಕೆಗಳನ್ನು ನೀಡಿರುವುದರ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಮುಫ್ತಿ ವಿರುದ್ಧ ದೇಶದ್ರೋಗ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಆಕೆಯನ್ನು ಜೈಲಿಗಟ್ಟಬೇಕು’ ಎಂದು ಬಿಜೆಪಿಯ ಜಮ್ಮು–ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.
‘ನಮ್ಮ ಪ್ರತಿ ಹನಿ ರಕ್ತವನ್ನೂ ರಾಷ್ಟ್ರಧ್ವಜ, ದೇಶ ಮತ್ತು ತಾಯ್ನೆಲಕ್ಕಾಗಿ ತ್ಯಾಗ ಮಾಡಲಿದ್ದೇವೆ. ಜಮ್ಮು–ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಹೀಗಾಗಿ ದೇಶದಲ್ಲಿ ಮತ್ತು ಜಮ್ಮು–ಕಾಶ್ಮೀರದಲ್ಲಿ ಒಂದೇ ಧ್ವಜಾರೋಹಣ ಮಾಡಬೇಕು’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.