ನಿತಿನ್ ಗಡ್ಕರಿ
ನಾಗ್ಪುರ: ಜಾತಿ ಹಾಗೂ ಧರ್ಮದ ಬೇಧವಿಲ್ಲದೆ ಎಲ್ಲರಿಗಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಬಿಜೆಪಿ ಸಿದ್ಧಾಂತ ಬೋಧಿಸುತ್ತದೆ. ಅದು ಮುಸ್ಲಿಮರ ವಿರುದ್ಧವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
‘ಜನವರಿ 15ರಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ–ಶಿವಸೇನಾ ಮೈತ್ರಿಕೂಟ ಬಹುಮತ ಪಡೆದುಕೊಂಡರೆ ಜನರ ಆಕಾಂಕ್ಷೆ ಹಾಗೂ ಕನಸುಗಳು ಈಡೇರುತ್ತದೆ. ಗೆದ್ದವರು ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ನಾನೇ ಗ್ಯಾರಂಟಿ’ ಎಂದು ಅವರು ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ಚುನಾವಣೆ ಸಂಬಂಧ ಮೂರು ಸಾರ್ವಜನಿಕ ಸಮಾವೇಶ ನಡೆಸಿದ ಅವರು, ಬಿಜೆಪಿ ಬಗ್ಗೆ ಇರುವ ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.
ನಾವು ಮುಸ್ಲಿಮರ ವಿರೋಧಿಗಳಲ್ಲ, ಆದರೆ ನಾವು ಭಯೋತ್ಪಾದನೆ ಹಾಗೂ ಪಾಕಿಸ್ತಾನದ ವಿರುದ್ಧ. ದೇಶಕ್ಕಾಗಿ ತ್ಯಾಗ ಮಾಡುವ ಮುಸ್ಲಿಮರು ಹಿಂದೂಗಳಷ್ಟೇ ನಮಗೆ ಆಪ್ತರು. ಒಬ್ಬ ಮಸೀದಿ, ಗುರುದ್ವಾರ ಅಥವಾ ಬುದ್ಧವಿಹಾರಕ್ಕೆ ಹೋಗಬಹುದು; ಆದರೆ ನಮ್ಮ ರಕ್ತ ಒಂದೇ. ನಾವು ಭಾರತೀಯರು, ನಾವು ಎಲ್ಲರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದಾರೆ.
ಬಿಜೆಪಿ–ಶಿವಸೇನಾ ಮೈತ್ರಿಗೆ ಪೂರ್ಣ ಬಹುಮತ ಸಿಕ್ಕಿದರೆ ನಿಮ್ಮ ಆಸೆ, ಆಕಾಂಕ್ಷೆ ಹಾಗೂ ಕನಸುಗಳು ಸಾಕಾರವಾಗಲಿದೆ ಎಂದು ಹೇಳಿದ್ದಾರೆ.
‘ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಾನು ಗ್ಯಾರಂಟಿ ನೀಡುತ್ತೇನೆ’ ಎಂದು ಹೇಳಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರ ಹಾಗೂ ತಾನು ಮಾಡಿದ ಮೂಲಭೂತ ಸೌಕರ್ಯಗಳ ಯೋಜನೆಗಳು ಜನರ ಮುಂದಿಟ್ಟಿದ್ದಾರೆ.
‘ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂಸಾಚಾರ ನಡೆಯಲಿದೆ ಎಂದು ವಿರೋಧ ಪಕ್ಷದ ನಾಯಕರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಯಾರೊಂದಿಗೂ ಬೇಧ ಮಾಡದೆ ಕೆಲಸ ಮಾಡುಬೇಕು ಎನ್ನುವುದನ್ನು ಬಿಜೆಪಿ ಸಿದ್ಧಾಂತ ಹೇಳುತ್ತದೆ’ ಎಂದು ನಾಗ್ಪುರ ಉತ್ತರದಲ್ಲಿ ಮಾತನಾಡುವಾಗ ಹೇಳಿದ್ದಾರೆ.
‘ನಾನು ಬಿಜೆಪಿಯ ಕಟ್ಟಾ ಕಾರ್ಯಕರ್ತ ಹಾಗೂ ಅದರ ಸಿದ್ಧಾಂತಗಳ ಹಿಂಬಾಲಕ. ಆದರೆ ನಾನು ನನಗೆ ಮತ ಹಾಕಿದವರ ಹಾಗೂ ಹಾಕದವರ ಪ್ರತಿನಿಧಿ. ಜಾತಿ, ಧರ್ಮ, ಭಾಷೆಗಳಿಗೆ ಅತೀತವಾಗಿ ಎಲ್ಲರಿಗಾಗಿ ನಾನು ಕೆಲಸ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಬಿಜೆಪಿ ಸಂವಿಧಾನವನ್ನು ಬದಲಿಸಬೇಕು ಎನ್ನುವ ಸುಳ್ಳು ಮಾಹಿತಿಯನ್ನು ಹರಡಲಾಗುತ್ತದೆ. ಆದರೆ ಕಾಂಗ್ರೆಸ್ 80 ಬಾರಿ ಸಂವಿಧಾನವನ್ನು ಬದಲಿಸಲು ಯತ್ನಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.