ADVERTISEMENT

ಅಸ್ಸಾಂನಲ್ಲಿ ಸಮಾಜ ಒಡೆಯಲು ಬಿಜೆಪಿ ಯತ್ನ: ಕಾಂಗ್ರೆಸ್ ಆರೋಪ

ಪಿಟಿಐ
Published 5 ಏಪ್ರಿಲ್ 2021, 3:03 IST
Last Updated 5 ಏಪ್ರಿಲ್ 2021, 3:03 IST
ಸಾಂದರ್ಭಿಕ ಚಿತ್ರ (ಕೃಪೆ: ಪಿಟಿಐ)
ಸಾಂದರ್ಭಿಕ ಚಿತ್ರ (ಕೃಪೆ: ಪಿಟಿಐ)   

ಗುವಾಹಟಿ: ಅಸ್ಸಾಂನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರವು ಸಂಪೂರ್ಣ ನಕಾರಾತ್ಮಕವಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜಿತೇಂದ್ರ ಸಿಂಗ್ ಟೀಕಿಸಿದ್ದಾರೆ.

ಅಸ್ಸಾಂನಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಳಸಿರುವ ಭಾಷೆ ಅಸ್ಸಾಂ ಸಮಾಜವನ್ನು ಒಡೆಯುವ ಉದ್ದೇಶದಿಂದ ಕೂಡಿದೆ ಎಂದು ಅವರು ಆರೋಪಿಸಿದ್ದಾರೆ.

ಅಸ್ಸಾಂನಲ್ಲಿ ಅಂತಿಮ ಹಂತದ ಮತದಾನ ಏಪ್ರಿಲ್ 6ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಅಭಿಯಾನ ಮುಕ್ತಾಯಕ್ಕೂ ಮುನ್ನ ಪ್ರತಿಪಕ್ಷಗಳ ಮೈತ್ರಿಕೂಟದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಯು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ ಅವರ ಪ್ರಚಾರದ ಮೇಲೆ ವಿಧಿಸಲಾಗಿದ್ದ ನಿರ್ಬಂಧದ ಅವಧಿಯನ್ನು ಕಡಿತಗೊಳಿಸಿರುವುದು ಮತ್ತು ಇಂತಹ ಕೆಲವು ಘಟನೆಗಳು ಚುನಾವಣಾ ಆಯೋಗವು ಕೇಸರಿ ಪಕ್ಷದ ಏಜೆಂಟರಂತೆ ವರ್ತಿಸುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.

ಚುನಾವಣೆ ಸಮಯದಲ್ಲಿ ಮಾತ್ರ ಮೋದಿ ಮತ್ತು ಅಮಿತ್ ಶಾ ಅಸ್ಸಾಂಗೆ ಬರುತ್ತಾರೆ. ಇವರು ಅಸ್ಸಾಂ ಜನ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾಗ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಚಳವಳಿಯಲ್ಲಿ ಅಸ್ಸಾಂ ಹೊತ್ತಿ ಉರಿಯುತ್ತಿದ್ದಾಗ ಎಲ್ಲಿದ್ದರು ಎಂದು ಜಿತೇಂದ್ರ ಸಿಂಗ್ ಪ್ರಶ್ನಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಪೈಪೋಟಿ ನೀಡಲು ಕಾಂಗ್ರೆಸ್ ಪಕ್ಷವು ಎಐಯುಡಿಎಫ್, ಬಿಪಿಎಫ್, ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್‌), ಎಜಿಎಂ, ಆರ್‌ಜೆಡಿ, ಎಎನ್‌ಪಿ, ಜಿಮೊಚಯಾನ್, ಜೆಪಿಪಿ ಜತೆ ಮೈತ್ರಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.