ADVERTISEMENT

‘ಜೈ ಶ್ರೀರಾಮ್‌’ ಘೋಷಣೆಯ ಮೂಲಕ ನೇತಾಜಿಗೆ ಅವಮಾನ: ಮಮತಾ

ಪಿಟಿಐ
Published 25 ಜನವರಿ 2021, 10:42 IST
Last Updated 25 ಜನವರಿ 2021, 10:42 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಪುರಸುರಾಹ್‌, ಪಶ್ಚಿಮ ಬಂಗಾಳ: ‘ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಸರ್ಕಾರವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಜೈ ಶ್ರೀರಾಮ್‌’ ಎಂಬ ಘೋಷಣೆ ಕೂಗುವ ಮೂಲಕ ಬಿಜೆಪಿಯು ನೇತಾಜಿ ಅವರನ್ನು ಅವಮಾನಿಸಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.

‘ಬಿಜೆಪಿಯು ‘ಭಾರತ್‌ ಜಲಾವೊ ಪಾರ್ಟಿ’. ಅದು ನಮ್ಮ ನೆಲದ ಪಕ್ಷವಲ್ಲ. ಆ ಪಕ್ಷವು ಪದೇ ಪದೇ ಪಶ್ಚಿಮ ಬಂಗಾಳದ ಮಹಾನ್‌ ನಾಯಕರನ್ನು ಅವಮಾನ ಮಾಡುತ್ತಿದೆ’ ಎಂದು ಟೀಕಿಸಿದ್ದಾರೆ.

ಇಲ್ಲಿ ಆಯೋಜನೆಯಾಗಿದ್ದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ‘ನೀವು ವ್ಯಕ್ತಿಯೊಬ್ಬರನ್ನು ಮನೆಗೆ ಕರೆಸಿ ಅವಮಾನ ಮಾಡುತ್ತೀರಾ? ಇದು ಪಶ್ಚಿಮ ಬಂಗಾಳ ಅಥವಾ ಈ ದೇಶದ ಸಂಸ್ಕೃತಿಯೇ? ಕಾರ್ಯಕ್ರಮದಲ್ಲಿ ನೇತಾಜಿ ಅವರಿಗೆ ಜೈಕಾರ ಹಾಕಿದ್ದರೆ ನಾನು ಖುಷಿ ಪಡುತ್ತಿದ್ದೆ. ಆದರೆ ಅವರು ಹಾಗೆ ಮಾಡುವುದಿಲ್ಲ. ಆ ಕಾರ್ಯಕ್ರಮದಲ್ಲಿ ‘ಜೈ ಶ್ರೀರಾಮ್‌’ ಘೋಷಣೆ ಕೂಗುವ ಅಗತ್ಯವೇ ಇರಲಿಲ್ಲ. ಅವರು ದೇಶದ ಪ್ರಧಾನಿಯ ಎದುರು ನನ್ನನ್ನು ಅವಮಾನಿಸಿದರು. ಇದು ಆ ಪಕ್ಷದ ಸಂಸ್ಕೃತಿ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್‌ ಸಿಗುವುದಿಲ್ಲ ಎಂಬುದು ಗೊತ್ತಾದ ಬಳಿಕ ಕೆಲವರು ಪಕ್ಷ ತೊರೆದಿದ್ದಾರೆ. ಅವರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಇಲ್ಲದೇ ಹೋಗಿದ್ದರೆ ನಾವೇ ಅವರನ್ನು ಹೊರದಬ್ಬುತ್ತಿದ್ದೆವು. ಪಕ್ಷದಿಂದ ಹೊರ ಹೋಗಬೇಕೆಂದುಕೊಂಡವರು ಆದಷ್ಟು ಬೇಗ ಆ ಕೆಲಸ ಮಾಡಲಿ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.