ಶ್ರೀನಗರ: ಉತ್ತರ ಕಾಶ್ಮೀರದ ಬಂಡಿಪೋರ್ ಜಿಲ್ಲೆಯಬಿಜೆಪಿ ಜಿಲ್ಲಾ ಅಧ್ಯಕ್ಷಶೇಖ್ ವಾಸೀಂ ಬಾರಿ ಸೇರಿದಂತೆ ಅವರತಂದೆ ಹಾಗೂ ಸಹೋದರನನ್ನು ಶಂಕಿತ ಉಗ್ರಗಾಮಿಗಳು ಬುಧವಾರ ಸಂಜೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಇಲ್ಲಿನ ಮುಸ್ಲಿಂಬಾದ್ನ ಶೇಖ್ ವಾಸೀಂ ಬಾರಿ ಅವರ ನಿವಾಸದ ಹೊರಗೆ ಉಗ್ರರು ಈಹತ್ಯೆ ಮಾಡಿದ್ದಾರೆ. ಶೇಖ್ ವಾಸೀಂ ಬಾರಿ (38), ಅವರ ತಂದೆ ಬಶೀರ್ ಅಹ್ಮದ್ ಬಾರಿ (60) ಮತ್ತು ಸಹೋದರ ಉಮರ್ ಬಾರಿ (30) ಶಂಕಿತ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಶೇಖ್ ವಾಸೀಂ ಬಾರಿನಿವಾಸದ ಬಳಿ ಇದ್ದ ಅಂಗಡಿಯ ಸಮೀಪದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಮೂವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಹಾಗೂ ಸೇನಾ ಯೋಧರ ಆಗಮಿಸಿದ್ದು ಉಗ್ರರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಅನಂತ್ನಾಗ್ ಜಿಲ್ಲೆಯ ಗ್ರಾಮವೊಂದರ ಪಂಚಾಯ್ತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.